Showing posts with label ಕನ್ನಡ ಸಾಹಿತಿಗಳು. Show all posts
Showing posts with label ಕನ್ನಡ ಸಾಹಿತಿಗಳು. Show all posts

Saturday, March 14, 2015

ಪರ್ವ ಮತ್ತು ಮಹಾಭಾರತ

ಹರವು ಸ್ಫೂರ್ತಿ ಗೌಡ ಅವರು ‘ಅವಧಿ’ಯಲ್ಲಿ ೬-೩-೧೫ರಂದು ಬರೆದಿರುವ ‘ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು’ ಲೇಖನದಲ್ಲಿ ಭೈರಪ್ಪನವರು ಮಹಾಭಾರತವನ್ನು ಆಧರಿಸಿ ಬರೆದಿರುವ ಪರ್ವ ಕಾದಂಬರಿಯ ಬಗ್ಗೆ  ಪ್ರಸ್ತಾಪಿಸಿರುಪ  ಪ್ರಶ್ನೆಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ನಿಲುಮೆಯ ಓದುಗರ ಜತೆ ಹಂಚಿಕೊಳ್ಳುವುದು ಈ ನನ್ನ ಬರಹದ ಉದ್ದೇಶ. ಸ್ಪೂರ್ತಿ ಗೌಡ ಅವರ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಸದ್ಯದ ನಮ್ಮ ಓದುಗರ ಮನೋಭಾವ, ಅವರ ಓದಿನ ರೀತಿ ನೀತಿ, ಕನ್ನಡ ಸಾಹಿತ್ಯದ ಸದ್ಯದ  ವಿಮರ್ಶೆಯ ವಾತಾವರಣ  ಇತ್ಯಾದಿಗಳ  ಪ್ರತಿಫಲನದಂತೆ ಇದೆ. ಇದು ಸಹಜ.ಆ ಪ್ರತಿಕ್ರಿಯೆಗಳ ಬಗ್ಗೆ ಇದಕ್ಕಿಂತ ಹೆಚ್ಚೇನು ಹೇಳುವುದು ಇಲ್ಲ.
ಸ್ಫೂರ್ತಿ ಗೌಡ ಅವರು ‘ಪರ್ವ’ದ ಬಗ್ಗೆ random ಆಗಿ ಎತ್ತಿರುವ  ಮೂರ್ನಾಲಕ್ಕು ಆಕ್ಷೇಪಣೆಗಳು ಮತ್ತು ಉಪ ಆಕ್ಷೇಪಣೆಗಳ relevanceಗೆ ಮಾತ್ರ ನನ್ನ ಈ ಬರಹ ಸೀಮಿತವಾಗಿದೆ. ಇತಿಹಾಸ, ಕಾವ್ಯ ಮತ್ತು ಪುರಾಣಗಳು ಬೆರೆತಿರುವ ಮಹಾಭಾರತದ ಕತೆಯನ್ನು ಈಗ ಚಾಲ್ತಿಯಲ್ಲಿರುವ ವಿಮರ್ಶೆಯ ಅಳತೆಗೋಲಿನಿಂದ ಅಳೆದು ಬೆಲೆ ಕಟ್ಟುವ ಕ್ರಿಯೆಯೇ ಸರಿಯಾದುದಲ್ಲ. ಇಂದು ನಮ್ಮ ಸಾಹಿತ್ಯದ ವಿಮರ್ಶಕ ಮತ್ತು ವಿಮರ್ಶಕಿಯರಿಗೆ  ಹಿಂದಿನ ಮತ್ತು ಇಂದಿನ ಕೃತಿಗಳಿಗೆ (ಅದು ಸಾಮಾಜಿಕ/ಐತಿಹಾಸಿಕ/ಪೌರಾಣಿಕ ಯಾವುದೇ ಆಗಿರಲಿ) ಪ್ರಗತಿಗಾಮಿ.ಪ್ರತಿಗಾಮಿ,ಮಹಿಳಾ ವಿರೋಧಿ,ವೈದಿಕ ಶಾಹಿ ಇತ್ಯಾದಿ ಹಣೆ ಪಟ್ಟಿಗಳನ್ನು ಕಟ್ಟಿ ಆ ಕೃತಿಗಳ  ಲೇಖಕರನ್ನು ಏರಿಸುವುದೋ ಇಳಿಸುವುದೋ ಮಾಡುವುದು ತುಂಬಾ ಖುಷಿ ಕೊಡುವ  ಕೆಲಸವಾಗಿದೆ. ಹಾಗೆ ನೋಡಿದರೆ ಇಂತಹ ವಿದ್ಯಮಾನ ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯದೇ. ಈಗ  ಈ ಕೆಲಸ ಇನ್ನೂ ಜೋರಾಗಿದೆ ಅಷ್ಟೇ. ವಿಮರ್ಶೆಯ ಪರಿಭಾಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ; ಬದಲಾಗಬೇಕು ಎಂಬುದರ ಬಗ್ಗೆ  ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಬದಲಾಗುತ್ತಿರುವ ವಿಮರ್ಶೆಯ ಪರಿಭಾಷೆಗಳನ್ನು ಸಾಹಿತ್ಯ ಕೃತಿಯೊಂದಕ್ಕೆ ನಾವು ಯಾವ ರೀತಿ apply ಮಾಡಬೇಕು? ಆ ಪರಿಭಾಷೆಗಳ limits ಏನು? ಎಂಬುದರ ಬಗ್ಗೆ ನಾವು ಯೋಚಿಸದಿದ್ದರೆ ಆಭಾಸವಾಗುತ್ತದೆ. ಸ್ಪೂರ್ತಿಗೌಡ ಅವರು ಪರ್ವದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೂಲ ಕಾರಣ ಹೊಸ ವಿಮರ್ಶೆಯ ಪರಿಭಾಷೆಗಳ wrong application.

ಪರ್ವ ವ್ಯಾಸರ ಸಂಸ್ಕೃತ ಮಹಾಭಾರತದ ಕಥಾ ಚೌಕಟ್ಟಿನಲ್ಲಿ ರಚಿತವಾಗಿರುವ ಕಾದಂಬರಿ. ಆ ಕಥಾ ಚೌಕಟ್ಟಿನ ಒಳಗೆ ವ್ಯಾಸರ ಮೂಲ ಕೃತಿಗೆ ಚ್ಯುತಿ ಬಾರದಂತೆ  ಅಲ್ಪ ಸ್ವಲ್ಪ ಬದಲಾವಣೆಗಳು . ಪಾಂಡವ-ಕೌರವರ ಕಥನಕ್ಕೆ ಅಷ್ಟೇನೂ ಅನಿವಾರ್ಯವಲ್ಲದ ನೂರಾರು ಉಪಕಥೆಗಳು, ಪ್ರಸಂಗಗಳನ್ನು ಬಿಟ್ಟುಬಿಡುವುದು ಮತ್ತು ‘ಪರ್ವ’ ಕಾದಂಬರಿಯ ತಂತ್ರದ ಅನುಕೂಲಕ್ಕಾಗಿ ಒಂದೆರೆಡು ಹೊಸ ಪಾತ್ರಗಳ ಸೃಷ್ಟಿ  (ದಾಸಿ, ಸೇವಕ, ಸಾರಥಿ ಇತ್ಯಾದಿ) ಇವುಗಳನ್ನು ಮಾಡಬಹುದೇ ಹೊರತು ಪೂರ್ತಿ ಕಥೆಯನ್ನೇ ಬದಲಾಯಿಸಿದರೆ ಅದು ವ್ಯಾಸರ ಕಥಾ ಚೌಕಟ್ಟನ್ನು ಮೀರಿದಂತೆ ಆಗುತ್ತದೆ.ಹಾಗಾದರೆ ದಾಸಿ, ಸೇವಕ ಸಾರಥಿ ಇವರುಗಳು  ಕೀಳು ಪಾತ್ರಗಳೋ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ನಾವು  ಇಂದು  ದಿನ ನಿತ್ಯ ಪ್ರಯಾಣಿಸುವ  ಬಸ್ಸಿನ ಡ್ರೈವರ್ , ರಿಕ್ಷಾ ಚಾಲಕರು ಇರುವಂತೆ ಹಿಂದೆ ರಥಕ್ಕೆ ಸಾರಥಿಗಳಿದ್ದರು ಅಷ್ಟೇ.ಒಮ್ಮೆ ಭೀಮ ಪ್ರಯಾಣಿಸುವಾಗ   ತನ್ನ ಯೋಚನೆಗಳನ್ನು, ಹಿಂದಿನ ಕಥೆಯನ್ನು ತನ್ನ ರಥದ  ಸಾರಥಿಗೆ ಹೇಳುತ್ತಾ ಹೋಗುತ್ತಾನೆ. ಕೆಲವೊಮ್ಮೆ ತಾನೇ ಯೋಚಿಸುತ್ತಾ ಹೋಗುತ್ತಾನೆ. ವ್ಯಾಸ ಭಾರತದಲ್ಲೂ ಭೀಮ ರಾಕ್ಷಸರನ್ನು ಕೊಂದಿದ್ದು,ರಾಕ್ಷಸ ಕುಲದ ಸಾಲಕಟಂಕಟಿಯನ್ನು ಮದುವೆಯಾಗಿದ್ದು ಅವರಿಬ್ಬರಿಗೆ ಘಟೋದ್ಗಜ ಹುಟ್ಟಿದ ಪ್ರಸಂಗ ಬರುತ್ತದೆ. ಆ ನಂತರ ಅಲ್ಲಿಂದ ಭೀಮ ಹೊರಟುಹೋಗಿದ್ದೂ   ಇದೆ. ಇದನ್ನು ಪುರುಷ ಪ್ರಧಾನ ಸಮಾಜ, ಮನು ಶಾಸ್ತ್ರ ವೇದ ಪುರಾಣ ಇತ್ಯಾದಿಗಳನ್ನೆಲ್ಲಾ ಹೇಳಿ ಸಾಲಕಟಂಕಟಿಗೆ ಮೋಸ ಆಯ್ತು ಎಂದು  ಸ್ಫೂರ್ತಿ ಗೌಡ ಅವರು ಟೀಕಿಸುವುದರಲ್ಲಿ ಅರ್ಥವಿಲ್ಲ. ಇಂದು ಜಾತಿ ಜಾತಿಗಳಿಗೆ, ಬುಡಕಟ್ಟು ಜನತೆಗೆ ತಮ್ಮ ತಮ್ಮ ಆಚಾರ ವಿಚಾರಗಳಲ್ಲಿ ಭಿನ್ನತೆ ಇರುವಂತೆ ಹಿಂದೆಯೂ ಇದ್ದವು.ಈ ಜಾತಿ ಬೇಧ ತಪ್ಪು, ಇದು ಶೋಷಣೆ ಎಂಬ ಮಾತುಗಳು ಪರ್ವ ಕಾದಂಬರಿಯ ವಿಮರ್ಶೆಯ ಚೌಕಟ್ಟನ್ನು ಮೀರಿದ್ದು. ಅದಕ್ಕೆ ಬೇರೆ ವೇದಿಕೆ ಇದೆ. ಅದೇ ರೀತಿ ದ್ರಾವಿಡ ವರ್ಣ, ಮೀನು ಹಿಡಿಯುವ ಜಾತಿ ಕೀಳೆ ಎಂಬ ಮಾತುಗಳೂ ಅರ್ಥವಿಲ್ಲದ್ದು.


ಮಹಾಭಾರತ ಮತ್ತು ಪರ್ವದಲ್ಲಿ ಆರ್ಯ ಮತ್ತು ಆರ್ಯೇತರ ಎಂದು ಹೇಳಿರುವುದನ್ನು ಸ್ಫೂರ್ತಿ ಅವರು ಆರ್ಯ ಮತ್ತು ದ್ರಾವಿಡ ಎಂದು ತಮ್ಮ ವಾದಕ್ಕೆ ತಕ್ಕಂತೆ ಬದಲಾಯಿಸಿಕೊಂಡರೆ ಅದು ಭೈರಪ್ಪನವರ ತಪ್ಪೇ? ಬಡತನ, ಗುಡಿಸಲು,ಕಪ್ಪು ವರ್ಣದ ಹೆಂಗಸಿನ ಮೇಲೆ ತಿರಸ್ಕಾರವೇಕೆ ಎಂಬ ಮಾತುಗಳೂ ಇದೇ ರೀತಿ context ಅನ್ನು ಮರೆತು ಇಂದಿನ ವಿಮರ್ಶೆಯ ಪರಿಭಾಷೆಯಲ್ಲಿ ಆಡಿದ ಮಾತುಗಳು. ಪರ್ವದಲ್ಲಿ ಭೈರಪ್ಪನವರು ಮಹಾಭಾರತ ಮತ್ತು ನಮ್ಮ ಭಾರತ ದೇಶದ ಜಾತಿ ಪದ್ಧತಿ ಸರಿಯೋ ತಪ್ಪೋ ಎಂಬುದರ ಮೇಲೆ  ವ್ಯಾಖ್ಯಾನ ಮಾಡಿಲ್ಲ. ಸುಮಾರು ಮೂರ್ನಾಲಕ್ಕು  ಸಾವಿರದಷ್ಟು ಹಿಂದಿನ ಕಥೆಯನ್ನು ನಮ್ಮ ಇಂದಿನ ಜೀವನದ ದೃಷ್ಟಿಕೋನದಿಂದ ಅಳೆಯುವುದೇ ತಪ್ಪಾಗುತ್ತದೆ.  ಹೀಗಾಗಿ ಸ್ಫೂರ್ತಿ ಗೌಡ ಅವರು ಭೈರಪ್ಪನವರ ಮೇಲೆ ಹಾಕಿರುವ FIR ಮತ್ತು charge sheet ನೇರವಾಗಿ ಮೂಲ ಮಹಾಭಾರತಕ್ಕೆ ಸಂಬಂಧಿಸಿದ್ದು. ಇದನ್ನು ನಾವು ಮರೆಯಬಾರದು. ಅಂತಹ ಕಥೆಯನ್ನು ಒದಲೇಬಾರದು , ವಿರೋಧಿಸಬೇಕು ಎಂಬುದು ಸ್ಫೂರ್ತಿ ಗೌಡ ಮತ್ತು ಅವರ ಲೇಖನಕ್ಕೆ ಸಹಮತ ವ್ಯಕ್ತಪಡಿಸಿರುವ ಓದುಗರ ಅಭಿಪ್ರಾಯವಾದರೆ ಅವರು ಆ ರೀತಿ ಮಾಡಲು ಸ್ವತಂತ್ರರು.
ಕೊನೆಯದಾಗಿ ಒಂದೆರೆಡು ಮಾತು. ಪರ್ವವನ್ನು ಪೂರ್ತಿ ಓದಿರುವವರು ಆ ಕಾದಂಬರಿಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯುವ ಆಸಕ್ತಿ ಇದ್ದರೆ ಈ ಕೆಳಗಿನ ಪುಸ್ತಕಗಳನ್ನು ಓದಬಹುದು.
೧. ಯುಗಾಂತ –ಇರಾವತಿ ಕರ್ವೆ ( ಪ್ರಕಾಶಕರು- ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ) — ಇದರ ಕನ್ನಡ ಅನುವಾದ ಇದೆ.
೨. ಎಸ್ ಎಲ್ ಭೈರಪ್ಪನವರ ಪರ್ವ ಒಂದು ಸಮೀಕ್ಷೆ–ಸಂಪಾದಕಿ ವಿಜಯಾ  (ಪ್ರಕಾಶಕರು–ಇಳಾ ಪ್ರಕಾಶನ. ಬೆಂಗಳೂರು-೧೮)
೩. ಎಸ್ ಎಲ್ ಭೈರಪ್ಪನವರ ‘ನಾನೇಕೆ ಬರೆಯುತ್ತೇನೆ? ಕೃತಿಯಲ್ಲಿರುವ ಪರ್ವ ಬರೆದಿದ್ದು ಎಂಬ ಲೇಖನ. (ಪ್ರಕಾಶಕರು -ಸಾಹಿತ್ಯ ಭಂಡಾರ  ಬೆಂಗಳೂರು–೫೩)

- ಮು.ಅ. ಶ್ರೀರಂಗ
"ನಿಲುಮೆ" ಅಂತರ್ಜಾಲ ತಾಣದಿಂದ

Wednesday, March 11, 2015

ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ನವದೆಹಲಿ: ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ. ಸೋಮವಾರ ಸೇರಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸಾಮಾನ್ಯ ಸಭೆ­ಯಲ್ಲಿ ಭೈರಪ್ಪ ಅವರನ್ನು ಫೆಲೋ ಗೌರವಕ್ಕೆ ಆಯ್ಕೆ ಮಾಡಲಾಯಿತು. ಭೈರಪ್ಪನವರ ಜತೆ ತೆಲುಗು ಸಾಹಿತಿ ಸಿ. ನಾರಾಯಣ ರೆಡ್ಡಿ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ.



ಸಾಹಿತ್ಯ ಅಕಾಡೆಮಿಯ ಫೆಲೋ, ಸಾಹಿತಿಗಳಿಗೆ ಸಲ್ಲುವ ಅತ್ಯಂತ ದೊಡ್ಡ ಗೌರವವಾಗಿದೆ. ಇದಕ್ಕೂ ಮೊದಲು ಡಾ.ಯು.ಆರ್‌.ಅನಂತಮೂರ್ತಿ ಅವರಿಗೆ ಈ ಗೌರವ ಸಂದಿತ್ತು. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂ ಗಾರ್‌, ದ.ರಾ. ಬೇಂದ್ರೆ ಮತ್ತು ಕೆ.ಎಸ್‌. ನರಸಿಂಹಸ್ವಾಮಿ ಅವರೂ ಸೇರಿದಂತೆ ಕನ್ನಡದ ಅನೇಕ ಲೇಖಕರಿಗೆ ಗೌರವ ಸಿಕ್ಕಿತ್ತು.
ಅಕಾಡೆಮಿ 21ಫೆಲೋಗಳಲ್ಲಿ ಭೈರಪ್ಪ­ನವರೂ ಒಬ್ಬರು. ಕರ್ನಾ ಟಕದಲ್ಲಿ ಮನೆ ಮಾತಾಗಿರುವ ಭೈರಪ್ಪ­ನವರು ದೊಡ್ಡ ಓದುಗ ಅಭಿಮಾನಿ­ಗಳನ್ನು ಹೊಂದಿದ್ದಾರೆ. ಮರಾಠಿ ಹಾಗೂ ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಭಾಷಾಂತರಗೊಂಡಿದೆ. ಅವರ ಕೃತಿಗಳು ಇಂಗ್ಲಿಷ್‌ಗೂ ಅನುವಾದಗೊಂಡಿವೆ.
2010ರಲ್ಲಿ ಸರಸ್ವತಿ ಸಮ್ಮಾನ್‌ ಪುರ­ಸ್ಕಾರಕ್ಕೂ ಪಾತ್ರರಾಗಿರುವ ಭೈರಪ್ಪನವರ ಒಲವು– ನಿಲುವುಗಳನ್ನು ಇಷ್ಟ ಪಡುವ­ವರಂತೆ ವಿರೋಧಿಸುವವರೂ ಇದ್ದಾರೆ. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ಭೈರಪ್ಪನವರ ಕೃತಿಗಳು ಉಳಿದವರಿಗಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.
‘ಆವರಣ’ ಸೇರಿದಂತೆ ಭೈರಪ್ಪನವರ ಅನೇಕ ಕೃತಿಗಳು ಎಂಟು, ಹತ್ತು ಮುದ್ರಣಗಳನ್ನು ಕಂಡಿವೆ.
ಪ್ರಜಾವಾಣಿ ಸುದ್ದಿ

Friday, August 22, 2014

ವಿದಾಯ : ಡಾ|| ಯು.ಆರ್. ಅನಂತಮೂರ್ತಿ

ವಿದಾಯ : ಡಾ|| ಯು.ಆರ್. ಅನಂತಮೂರ್ತಿ

 

 

ಕನ್ನಡ ಪ್ರಭ ಸುದ್ದಿ

ಡಾ|| ಯು.ಆರ್. ಅನಂತಮೂರ್ತಿ ಇನ್ನಿಲ್ಲ

 
 ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಶುಕ್ರವಾರ ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ಇಂದು ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.

ಅನಂತಮೂರ್ತಿ ಅವರು ನಡೆದು ಬಂದ ಹಾದಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ 1932ರ ಡಿಸೆಂಬರ್ 21ರಂದು ಜನಿಸಿದ್ದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಇನ್ನಿಲ್ಲ. ಇನ್ನು ಮುಂದೆ ಅವರು ನನೆಪು ಮಾತ್ರ.

ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಕನ್ನಡಕ್ಕೆ ತಂದ ಆರನೇಯವರು. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. 1998ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.

ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿಎಚ್‌ಡಿ(ಬರ್ಮಿಂಗ್‌ಹ್ಯಾಮ್ ವಿವಿ, ಯುನೈಟೆಡ್ ಕಿಂಗ್‌ಡಂ) 1966. ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲೀಷ್ ಬೋಧಕರಾಗಿ ಸೇವೆ ಆರಂಭಿಸಿ ತದ ನಂತರ 1987ರಲ್ಲಿ ಕೇರಳದ ತಿರುವಂತನಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. 1993ರಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಈಬರ್‌ಹಾರ್ಡ್ ವಿಶ್ವವಿದ್ಯಾಲಯ, ಲೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸೇರಿದಂತೆ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಸ್ಕಾರ, ಭವ, ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಯೂರೋಪಿಯನ್ ಭಾಷೆ ಸೇರಿದಂತೆ ಭಾರತ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರು ಬರೆದಂತೆ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರವಾಗಿ ಮೂಡಿ ಬಂದಿದೆ.

ಪ್ರಶಸ್ತಿಗಳು:

  • ಬಷೀರ್ ಪುರಸ್ಕಾರಂ, ಕೇರಳ, 2012
  • ಗೌರವ ಡಾಕ್ಟರೇಟ್, ಕೇಂದ್ರೀಯ ವಿವಿ, ಗುಲ್ಬರ್ಗ, 2012
  • ಗೌರವ ಡಾಕ್ಟರೇಟ್, ಕಲ್ಕತ್ತಾ ವಿವಿ, 2012
  • ರವೀಂದ್ರನಾಥ್ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿವಿ, 2012
  • ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
  • ದಿ ಹಿಂದೂ ಲಿಟರೆರಿ ಪ್ರಶಸ್ತಿ, 2011
  • ಗಣಕ್‌ಸೃಷ್ಟಿ ಪ್ರಶಸ್ತಿ, ಕೊಲ್ಕತ್ತ, 2002
  • ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' 2008
  • ಪದ್ಮಭೂಷಣ, 1998
  • ಮಾಸ್ತಿ, 1995
  • ಜ್ಞಾನಪೀಠ ಪ್ರಶಸ್ತಿ, 1994
  • ರಾಜ್ಯೋತ್ಸವ ಪ್ರಶಸ್ತಿ, 1984

ಸಣ್ಣ ಕಥೆಗಳು

  • ಎಂದೆಂದಿಗೂ ಮುಗಿಯದ ಕಥೆ
  • ಮೌನಿ
  • ಪ್ರಶ್ನೆ
  • ಕ್ಲಿಫ್ ಜಾಯಿಂಟ್
  • ಆಕಾಶ ಮತ್ತು ಬೆಕ್ಕು
  • ಎರಡು ದಶಕದ ಕಥೆಗಳು
  • ಐದು ದಶಕದ ಕಥೆಗಳು

ಕಾದಂಬರಿಗಳು

  • ಸಂಸ್ಕಾರ
  • ಭಾರತೀಪುರ
  • ಅವಸ್ಥೆ
  • ಭವ
  • ದಿವ್ಯಾ

ನಾಟಕ

  • ಆವಾಹನೆ

ವಿಮರ್ಶೆ ಮತ್ತು ಪ್ರಬಂಧ

  • ಪ್ರಜ್ಞೆ ಮತ್ತು ಪರಿಸರ
  • ಸನ್ನಿವೇಶ
  • ಸಮಕ್ಷಮ
  • ಪೂರ್ವಾಪರ
  • ಯುಗಪಲ್ಲಟ
  • ವಾಲ್ಮಿಕಿಯ ನೆವದಲ್ಲಿ
  • ಮಾತು ಸೋತ ಭಾರತ
  • ಸದ್ಯ ಮತ್ತು ಶಾಶ್ವತ

ಚಲನಚಿತ್ರವಾಗಿ ಮೂಡಿಬಂದ ಕಾದಂಬರಿಗಳು

  • ಸಂಸ್ಕಾರ
  • ಬರ
  • ಅವಸ್ಥೆ
  • ಮೌನಿ
  • ದೀಕ್ಷಾ
  • ಭಾರತೀಪುರ

Sunday, March 23, 2014

ಹಿರಿಯ ಸಾಹಿತಿ ಯಶವಂತ ಚಿತ್ತಾಲ ನಿಧನ

ವಿ ದಾ ಯ
ಯಶವಂತ ಚಿತ್ತಾಲ


1928 – 2014

ಪ್ರಜಾವಾಣಿ ಸುದ್ದಿ

ಮುಂಬೈ: ಕನ್ನಡದ ಹಿರಿಯ ಸಾಹಿತಿ ಯಶ­ವಂತ ಚಿತ್ತಾಲ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ತೀವ್ರ ಅನಾರೋಗ್ಯದಿಂದ ಬಳಲು­ತ್ತಿದ್ದ  ಅವರು, ಕಳೆದ ನಲವತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದರು. ಭಾನುವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ತಮ್ಮ ಕಥೆ ಕಾದಂಬರಿಗಳ ಮೂಲಕ ಕನ್ನಡದ ಸಾಹಿತ್ಯದ ಸಾಧ್ಯತೆಗಳನ್ನು ವಿಸ್ತರಿಸಿದ್ದು, ಯಶವಂತ ಚಿತ್ತಾಲರ ಪ್ರಮುಖ ಸಾಧನೆ.

ಕೊಂಕಣಿ ಮರಾಠಿಯನ್ನು ಮನೆ­ಮಾತಾಗಿ ಹೊಂದಿದ್ದ ಅವರು ತಮ್ಮ ಅಭಿವ್ಯಕ್ತಿ ಭಾಷೆಯನ್ನಾಗಿ ಆರಿಸಿ­ಕೊಂಡಿದ್ದು ಕನ್ನಡವನ್ನು. ಉತ್ತರಕನ್ನಡ ಜಿಲ್ಲೆಯ ಹನೇಹಳ್ಳಿ ಚಿತ್ತಾಲರ ಹುಟ್ಟೂರು. ವಿಠೋಬಾ ಮತ್ತು ರುಕ್ಮಿಣಿ ಅವರ ತಂದೆ, ತಾಯಿ. ದಿವಂಗತ ಕವಿ ಗಂಗಾಧರ ಚಿತ್ತಾಲರು ಅವರ ಸಹೋದರ.

ಯಶವಂತ ಚಿತ್ತಾಲರ ಪ್ರಾಥಮಿಕ ವಿದ್ಯಾಭ್ಯಾಸ ನಡೆದಿದ್ದು ಹನೇಹಳ್ಳಿ ಮತ್ತು ಕುಮಟಾದಲ್ಲಿ. ಮುಂಬೈ ಮತ್ತು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಪಡೆದ ಅವರು ರಾಸಾ­ಯನಿಕ ತಂತ್ರ­ಜ್ಞರಾಗಿ ಹಲವು ಹುದ್ದೆ­ಗಳಲ್ಲಿ ಕಾರ್ಯ­ನಿರ್ವಹಿಸಿದ್ದಾರೆ.

ವೃತ್ತಿಯಲ್ಲಿನ ಅನುಭವಗಳನ್ನು, ಆಧುನಿಕ ಕೈಗಾರಿಕಾ ಜಗತ್ತಿನ ಕುರಿತ ತಮ್ಮ ವಿಶೇಷ ಒಳನೋಟಗಳನ್ನು ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಹನೇಹಳ್ಳಿ ಮತ್ತು ಮುಂಬೈ ಅವರ ಸಾಹಿತ್ಯ ಸೃಷ್ಟಿಯ ಪ್ರಮುಖ ದ್ರವ್ಯಗಳು.