Thursday, June 11, 2020

ಅಪ್ಪನೆಂಬ ಆಕಾಶ

ಪುಟ್ಟ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಾ
ಹಿಡಿದ ಕೊಡೆಯು ಹನಿಯ ಸುರಿಸುತಿರೆ
ನಾಗರಿಕತೆಯ ಮರೀಚಿಕೆಯಲ್ಲಿ
ಕಳೆದುಹೋದ ಮನಸ್ಸು
ಮರಳುತ್ತಿದೆ ಜ್ಞಾಪಕ ಚಿತ್ರ ಶಾಲೆಗೆ
ಅಂದು ನನ್ನಪ್ಪನ ಕೊಡೆಯಲ್ಲಿ
ಇಣುಕುತ್ತಿದ್ದ ನೆತ್ತಿ ಮೇಲಿನ ನೇಸರ
ಇಂದು ನಾನು ಹಿಡಿದ ಛತ್ರಿಯಲಿ
ಬಣ್ಣಗಳ ಚಿತ್ತಾರ
ಕೆತ್ತುತ್ತಿವೆ ಕನಸುಗಳ ರಂಗೋಲಿ
ನನ್ನಪ್ಪನ ನೇಗಿಲ ರೇಖೆಗಳಲ್ಲಿ
ಅವನ ಅಂಗೈ ರೇಖೆಗಳು ಮಟಮಾಯ
ತೇಪೆ ಹಾಕಿದ ಕೊಡೆ ಹಿಡಿದ ನನ್ನಪ್ಪ
ಗೋವರ್ಧನಗಿರಿಯೆಂಬ ನನ್ನಮ್ಮನ
ಮುಂದೆ ಮಂಕಾಗಿಬಿಟ್ಟ
ಹೇಳ ಹೆಸರಿಲ್ಲದೆ ಉಳಿದು ಬಿಟ್ಟ
ನನ್ನಪ್ಪ ನಯ ನಾಜೂಕಿನ ಮನುಷ್ಯನಲ್ಲ
ಭೂತಾಯ ಧೂಳನ್ನು ವಿಭೂತಿ ಎಂದವನು
ಬೆವರಲ್ಲಿಯೇ ಸ್ನಾನವನು ಮಾಡಿದವನು
ತಪ್ಪು ಮಾಡಿ ಬೆಪ್ಪನಾಗಬೇಡೆಂದು
ನನ್ನ ಜೀವನ ಒಪ್ಪ ಮಾಡುವುದರಲ್ಲಿಯೇ
ಗಾಣದೆತ್ತಿನ ಹಾಗೆ ಸವೆದವನು
ಎಲೆಮರೆಯ ಕಾಯಂತೆ ಉಳಿದವನು
ನನ್ನಪ್ಪ ತನಗಾಗಿ ಬದುಕಿದ್ದೇ ಇಲ್ಲ
ನಮಗಾಗಿ ದುಡಿದಿದ್ದೇ ಎಲ್ಲಾ
ಅಮ್ಮನೆಂಬ ಬಂಧದಲ್ಲಿ ಗೌಣವಾಗಿಬಿಟ್ಟ
ಆದರೂ ಕನಸುಗಳ ಕೋಟೆ ಕಟ್ಟಿಕೊಂಡ
ಅದು ಗೆದ್ದಲು ಕಟ್ಟಿದ ಹುತ್ತವೆಂದು
ನನ್ನಪ್ಪನಿಗೆ ತಿಳಿಯಲಿಲ್ಲವೇನೋ
ಕಾರಣ ನನ್ನಪ್ಪನ ಆದರ್ಶಗಳು
ಅಜ್ಜ ಹಾಕಿದ ಆಲದ ಮರ
ಆಲದ ಮರದಲ್ಲಿ ಆಸರೆ ಪಡೆದ ಹಕ್ಕಿಗಳೆಷ್ಟೊ
ಕೊಂಬೆ ಕೊಂಬೆಗೆ ಜೋತುಬಿದ್ದ ಗೂಡುಗಳೆಷ್ಟೊ
ರೆಕ್ಕೆ ಬಲಿತ ಹಕ್ಕಿಗಳು ಎತ್ತೆತ್ತಲೋ ಹಾರಿಹೋದವು
ನನ್ನಪ್ಪನ ಕನಸುಗಳು ನಗರಕ್ಕೆ ಹಾರಿದವು
ನನ್ನ ಕನಸಿನ ಹಕ್ಕಿಯು
ಇನ್ನು ವಿದೇಶಕ್ಕೆ ಹಾರದೆ ಇದ್ದೀತೆ
ಅಪ್ಪ ಈಗ ಆಕಾಶ ಮಾತ್ರ
ನಿತ್ಯ ಮಳೆಯಲಿ ತೋಯುತಿಹನು
ಕೊಡೆಯ ಅಂಚಲಿ ಹನಿಯ ಸುರಿಸುತಿಹನು
ತನ್ನ ಕಣ್ಣ ಹನಿಯ ಕಾಣದಿರಲೆಂದು
ನಿತ್ಯ ಮಳೆಯ ಕೋರುತಿಹನು
ಅಪ್ಪನಿಡಿದ ಕೊಡೆಯು ಸಂಬಂಧಗಳ
ಕೊಂಡಿಯ ಬೆಸೆಯುತಿದೆ
ಭರವಸೆಯ ಬಂಡಿಯ ನಡೆಸುತ್ತಿದೆ


ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆ, ಶಾಪೂರು
ಕೋಲಾರ ತಾಲ್ಲೂಕು

No comments: