ಮಂಜೇಶ್ವರ
ಗೋವಿಂದ
ಪೈ
ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ ಮತ್ತು ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩-೩-೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.
ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ಎ. ವ್ಯಾಸಂಗವನ್ನು ತಂದೆಯ ನಿಧನದ ದೆಸೆಯಿಂದ ನಿಲ್ಲಿಸಿದರು. ಸ್ವಂತ ವ್ಯಾಸಂಗದಲ್ಲೇ ಕನ್ನಡ, ಇಂಗ್ಲಿಷ್, ಗ್ರೀಕ್, ಫ್ರೆಂಚ್, ಸಂಸ್ಕೃತ, ಜರ್ಮನ್, ಪ್ರಾಕೃತ ಮೊದಲಾದ ದೇಶ ವಿದೇಶಗಳ ಭಾಷೆಗಳನ್ನು ಕಲಿತರು. ಸಾಹಿತ್ಯ ರಚನೆ ಸಂಶೋಧನೆಯಲ್ಲಿ ತೊಡಗಿದರು. ಎಲ್ಲೂ ಉದ್ಯೋಗಕ್ಕೆ ಸೇರಲಿಲ್ಲ.
ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತು. ಪೈಯವರನ್ನು ೧೯೪೯ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.
ಅವರಿಗೆ ಸಾಹಿತ್ಯ ಪರಿಷತ್ತು ೧೯೫೧ರಲ್ಲಿ ಬೊಂಬಾಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು.
ಸಾಹಿತ್ಯ ಸೇವೆ: ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, ಗೊಲ್ಗೊಥಾ ವೈಶಾಖಿ, ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾರ್ಶ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಇವರ ಪ್ರಮುಖ ಕೃತಿಗಳು.
ಗೋವಿಂದ ಪೈ ಅವರು ಮಂಜೇಶ್ವರದಲ್ಲಿ ೬-೯-೧೯೬೩ರಲ್ಲಿ ನಿಧನರಾದರು.
No comments:
Post a Comment