ಡಾ|| ಜಿ.ಎಸ್. ಶಿವರುದ್ರಪ್ಪ
ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೭-೨-೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ (ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.ಎ. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ (೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ (೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ
(೧೯೮೭), ಪಂಪ ಪ್ರಶಸ್ತಿ (೧೯೯೮), ೨೦೦೦ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨೦೦೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
(೨೦೦೩) ದೊರೆಯಿತು.
ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು:
ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ.ಎಸ್.ಎಸ್ ಅವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ಬರೆದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಿದೆ :
ಸಂಪಾದನೆ : ೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ೬ ಸಂಪುಟಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧೦ ಸಂಪುಟಗಳು, ಕೆ.ಎಸ್.ನ ಸಂಭಾವನಾ ಗ್ರಂಥ ಚಂದನ.
ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ (೧೯೬೧), ಸೌಂದರ್ಯ ತಿಬಿಂಬ (೧೯೬೯), ಕನ್ನಡ ಕವಿಗಳ ಕಾವ್ಯ ಕಲ್ಪನೆ (೧೯೮೯) ಇತ್ಯಾದಿ.
ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ ೨೨ ದಿನ (೧೯೭೩), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ.
ಕವನ ಸಂಗ್ರಹಗಳು : ಸಾಮಗಾನ (೧೯೫೧), ಚೆಲುವು-ಒಲವು (೧೯೫೩), ದೇವಶಿಲ್ಪ (೧೯೫೬), ದೀಪದ ಹೆಜ್ಜೆ (೧೯೫೯), ಕಾರ್ತೀಕ (೧೯೬೧), ತೀರ್ಥವಾಣಿ (೧೯೬0), ಅನಾವರಣ (೧೯೬೩), ನನ್ನ ನಿನ್ನ ನಡುವೆ (೧೯೭೩), ವ್ಯಕ್ತ-ಮಧ್ಯ (೧೯೯೯) ಇತ್ಯಾದಿ.
ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ ೨೩-೧೨-೨೦೧೩ರಲ್ಲಿ ದೈವಾಧೀನರಾದರು.