ನೇತಾಡಿ ಮಿರುಗುವ
ಕೆಂಪು ಮುತ್ತು
ನಿನ್ನ ಖಡ್ಗ ಹರಿದ ಶಿರದಿಂದ
ಒಸರಿ
ಹೆಪ್ಪುಗಟ್ಟಿದ
ಹಸಿಯ ರಕ್ತ
ಅದರ ಪಕ್ಕದಲ್ಲಿಯೇ
ನಗುತಿದೆ ಗಂಡಗತಿಸಿದ
ಗರತಿಯರ ನಿರಾಸೆಯ
ಅಕ್ಷಿಗಳಿಂದ ಉದುರಿ
ಮರಗಟ್ಟಿದ ಸ್ಪಟಿಕ ಸದೃಶ
ಅಶ್ರು ನಕ್ಷತ್ರ
ಜರತಾರಿ ವಸನಗಳಿಂದ
ವಿಜೃಂಭಿಸುತ್ತಿರುವ
ನಿನ್ನ ಹುಸಿನಗೆಯ ಹಿಂದೆ
ಕಪಟವರಿಯದ ಹಸುಗೂಸುಗಳ
ಅನಾಥ ರೋದನದ
ದಳ್ಳುರಿ
ಬಹುಪರಾಕಿನ ಗದ್ದಲದೊಳಗೆ
ದನಿಯಿರದ ಸಮೂಹದೆದುರು
ರತ್ನಖಚಿತ ಸಿಂಹಾಸನದಲಿ
ನೀನು ಪವಡಿಸಿದ್ದರೂ
ನಿನ್ನ ಅಪ್ಪಿರುವ ಖಡ್ಗ
ನಿನ್ನ ಅಳ್ಳೆದೆಯ ಕುರುಹು
ಭೂಪತಿ ಎಂಬ
ಬಿರುದಾಂಕಿತ ನೀನಾದರು
ಒಂದಿಂಚೂ ನೆಲ
ನಿನಗೊಲಿದುದಿಲ್ಲ
ಅನ್ನಕೊಡುವ ಅವ್ವ
ಎಂದು ನೆರೆನಂಬಿದವರನು
ಮಾತ್ರ ಅದು ಹರಸದೆ
ಕೈಬಿಟ್ಟಿಲ್ಲ
ನೀನು, ಈಸು ದೇಶಗಳ ಈಶ
ಎಂದು ಮೆರೆದಾಡಿದರೇನು
ಅಂದಣಗಳಲೇ ಮೆರೆದರೇನು
ಮೃಷ್ಟಾನ್ನವನೇ ಉಂಡರೇನು
ಮರಣಿಸಿದ ಮರು ಘಳಿಗೆ
ಮಣ್ಣಾಗುವುದು ತಪ್ಪುವುದೇನು
- ಕೆ.ಎಂ. ಗಂಗಾಧರಪ್ಪ
- ಕೆ.ಎಂ. ಗಂಗಾಧರಪ್ಪ
No comments:
Post a Comment