Sunday, December 11, 2016

ಸ್ವಾತಂತ್ರ್ಯ, ಸ್ವೇಚ್ಛೆ ಹಾಗೂ ಮೌಲ್ಯಗಳನ್ನು ಒರೆಗೆ ಹಚ್ಚುವ ‘ಕ್ಷಮೆ’



ಅವಳೊಬ್ಬಳು ಸಾಫ್ಟ್ವೇರ್ ಇಂಜಿನಿಯರ್. ಗಂಡ ಮತ್ತು ಮುದ್ದಾದ ಮಗಳ ಸುಂದರ ಸಂಸಾರವಿದೆ ಆಕೆಗೆ. ಗತಿಸಿ ಹೋದ ತಾಯಿಯ ನೆನಪಿನಲ್ಲೇ ಅಮ್ಮನ ಸಾವಿಗೆ ಪರೋಕ್ಷವಾಗಿ ಕಾರಣವಾದ ತನ್ನ ಅಪ್ಪನನ್ನೂ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾಳೆ. ಹೆಸರು ಪಲ್ಲವಿ. ಉದ್ಯೋಗದ ಕಾರಣದಿಂದ ವಿದೇಶಗಳಿಗೂ ಹೋಗಬೇಕಾಗಿ ಬರುತ್ತದೆ. ಸದಾ ಅವಳ ಬೆನ್ನೆಲುಬಾಗಿರುವ ಗಂಡ ರಘು ಏನೂ ಕ್ಯಾತೆ ತೆಗೆಯದೇ ಅವಳು ಹೋಗಬೇಕೆಂದಲ್ಲೆಲ್ಲ ಕಳಿಸುತ್ತಾನೆ. ಪುಟ್ಟ ಮಗು ಪೂರ್ವಿ ಕೂಡಾ ತನಗೆ ತರಬೇಕಾದ ವಸ್ತುಗಳ ದೊಡ್ಡದೊಂದು ಪಟ್ಟಿಯನ್ನು ಕೊಟ್ಟೇ ಅಮ್ಮನನ್ನು ಪ್ರೀತಿಯಿಂದ ಬೀಳ್ಕೊಡುತ್ತದೆ. ಒಮ್ಮೆ ನಾಲ್ಕು ತಿಂಗಳ ಅಮೇರಿಕಾ ಪ್ರವಾಸ ಮಾತ್ರ ಆಕೆಯ ಜೀವನದಲ್ಲಿ ಒಂದು ತಿರುವನ್ನು ತಂದಿಡುತ್ತದೆ.

ಸ್ವತ: ಸಾಫ್ಟ್ವೇರ್ ಇಂಜಿನಿಯರ್ ಆಗಿರುವ, ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿರುವ, ಭೈರಪ್ಪನವರ ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳ ಬಗ್ಗೆ ಭೈರಪ್ಪನವರ ಮುಂದೆಯೇ ಭಾಷಣ ಮಾಡಿ ಎಲ್ಲರಿಂದ ಭೇಷ್ ಎನ್ನಿಸಿಕೊಂಡಿರುವ ಸಹನಾ ವಿಜಯ್ ಕುಮಾರ್ ಬರೆದಿರುವ ಚೊಚ್ಚಲ ಕಾದಂಬರಿಕ್ಷಮೆ’. ಸರಳ ಸುಂದರ ಭಾಷೆಯ ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.

ಕಾದಂಬರಿಯ ಮುಖ್ಯ ಪಾತ್ರ ಪಲ್ಲವಿ ಯಾವುದೋ ಪ್ರಾಜೆಕ್ಟ್ ನಿಮಿತ್ತ ಅಮೇರಿಕಾಕ್ಕೆ ವಿಮಾನದಲ್ಲಿ ಹಾರುವುದರೊಂದಿಗೆ ಕಾದಂಬರಿ ಶುರುವಾಗುತ್ತದೆ. ವಿದ್ಯಾವಂತೆ, ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ವಿಮರ್ಶೆ ಮಾಡುವ ಸಾಮರ್ಥ್ಯವುಳ್ಳವಳು, ಪ್ರೀತಿ ಯಾವುದು ಅನೈತಿಕತೆ ಯಾವುದು ಎಂಬುದನ್ನು ಒರೆಗೆ ಹಚ್ಚುವ ಮನಸ್ಥಿತಿಯುಳ್ಳ ಪಲ್ಲವಿಯ ಸ್ವಗತದಂತಿದೆಕ್ಷಮೆ’. ತನ್ನ ಅಪ್ಪ ಇನ್ನೊಬ್ಬ ಹೆಂಗಸಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದು ಅಮ್ಮ ಆತ್ಮಹತ್ಯೆ ಮಾಡಿಕೊಂಡ ನೆನಪು ಅವಳನ್ನು ಸದಾ ಕಾಡುತ್ತಿರುತ್ತದೆ. ಬಾಲ್ಯದಿಂದಲೂ ಎಲ್ಲದರಲ್ಲೂ ಗೆದ್ದವಳು ಅಮ್ಮನನ್ನು ಕಳೆದುಕೊಂಡದ್ದಕ್ಕಾಗಿ ಅಪ್ಪನನ್ನು ಸೋಲಿಸಲು ನಿರ್ಧರಿಸುತ್ತಾಳೆ. ಆದರೂ ತನ್ನ ಮನೆಯಲ್ಲೇ ಅಪ್ಪನನ್ನು ಸಲಹುತ್ತಿರುತ್ತಾಳೆ. ಅವಳಣ್ಣ ಚರಣ್ ಅಂತೂ ಕ್ಷಣ ಕ್ಷಣಕ್ಕೂ ಅಪ್ಪನ ಮೇಲೆ ದ್ವೇಷ ಕಾರುತ್ತಿರುತ್ತಾನೆ.

ಹದಿ ಹರೆಯದಲ್ಲಿ ಅವಳ ಹೃದಯದಲ್ಲಿ ಚೇತನ್ ಎಂಬವನ ಪ್ರೀತಿ ಮೊಳಕೆಯೊಡೆಯುತ್ತದೆ. ಕಾರಣಾಂತರಗಳಿಂದ ಆತ ಸಿಗದಾದಾಗ ಲೆಕ್ಚರರ್ ಆಗಿರುವ ರಘುವನ್ನು ಮದುವೆಯಾಗುತ್ತಾಳೆ. ಆದರೆ,  ಪ್ರಾಜೆಕ್ಟ್ಗೆಂದು ಅಮೇರಿಕಾಕ್ಕೆ ತೆರಳಿದಾಗ ಅಲ್ಲಿ ಚೇತನ್ ಸಿಕ್ಕಿ ಬಿಡುತ್ತಾನೆ. ಮೊದ ಮೊದಲು ಆತನನ್ನು ದೂರವಿಟ್ಟರೂ ನಂತರ ಆತನ ಸಾಂಗತ್ಯ ಅವಳಿಗೆ ಹಿತ ಕೊಡುತ್ತದೆ. ಆತನ ಜೊತೆ ಇರುವಾಗ ಮನೆ, ಗಂಡ, ಮಗು, ಅಪ್ಪ, ಗತಿಸಿದ ಅಮ್ಮನ ಕಹಿ ನೆನಪು ಯಾವುದೂ ಆಕೆಯನ್ನು ಕಾಡುವುದಿಲ್ಲ. ಗೆಳೆಯನಿಗಿಂತಲೂ ಹತ್ತಿರನಾದ, ಇನಿಯನಿಗಿಂತಲೂ ಎತ್ತರನಾದ ಆತ್ಮೀಯ ಸಖನಾಗುತ್ತಾನೆ ಚೇತನ್.

ಚೇತನ್ ಎದುರಿಗಿದ್ದಾಗ ಎಲ್ಲವನ್ನೂ ಮರೆಯುವ ಅವಳು ಒಂಟಿಯಾಗಿರುವಾಗ ಮಾತ್ರ ಅತ್ಯಂತ ಭೀಕರವಾದ ಮಾನಸಿಕ ತೊಳಲಾಟಕ್ಕೆ ಸಿಲುಕುತ್ತಾಳೆ. ಕಳೆದುಕೊಂಡಿದ್ದ ತನ್ನ ಮೊದಲ ಪ್ರೀತಿ ಮತ್ತೆ ಸಿಗುತ್ತಿದೆ ಎಂಬ ಪುಳಕ ಒಂದೆಡೆಯಾದರೆ ತಾನು ಮಾಡುತ್ತಿರುವುದು ನೈತಿಕ ನೆಲೆಗಟ್ಟಿನಲ್ಲಿ ಸರಿಯೇ? ತನ್ನ ಕುಟುಂಬದವರು ತನಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿರುವೆನೇ ಎಂಬ ಗೊಂದಲದಲ್ಲಿ ಸಿಲುಕುತ್ತಾಳೆ. ”ಸ್ವಂತ ಮನೆ, ಸಂಬಳಗಳೆಲ್ಲ ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತವಷ್ಟೇ. ಕಷ್ಟ ಇಲ್ಲದಿರೋದೇ ಬೇರೆ, ಸುಖದಿಂದಿರೋದೇ ಬೇರೆಎಂಬ ಜಿಜ್ಞಾಸೆಗಳು ಅವಳ ಮನದಲ್ಲಿ ಮೂಡುತ್ತವೆ.

ತನ್ನನ್ನು ಪ್ರೀತಿಸುವ, ಕಾಪಾಡುವ ಗಂಡನಿದ್ದೂ ಚೇತನ್ ಕಡೆಗೇ ಕ್ರಮೇಣ ವಾಲುತ್ತಾಳೆ. ಆದರೆ,  ಏರ್ ಪೋರ್ಟ್ನಲ್ಲಿ ಗಂಡನನ್ನು ಬಲವಾಗಿ ತಬ್ಬಿಕೊಂಡುಮಿಸ್ ಯೂ ಹನಿಎಂದು ಹೇಳಿ ಅಮೇರಿಕಾದಲ್ಲಿ ಪರ ಪುರುಷನ ಜೊತೆ ಸರಸವಾಡುವ ಮೌಶಮಿಯಂತೆ ಮತ್ತು ಗಂಡನಿಗೆ ಪಾಠ ಕಲಿಸಲು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಅಬಾರ್ಷನ್ ಮಾಡಿಸುವ ಮಾಲಿನಿಯಂತೆ ತಾನು ಆಗಲಾರೆ ಎಂಬ ನಂಬಿಕೆ ಅವಳಿಗಿದೆ. ಅತ್ತ ಗಂಡ, ಮಗುವನ್ನೂ ಬಿಡಲಾರದೇ ಇತ್ತ ಚೇತನ್ ಸಾಂಗತ್ಯವನ್ನೂ ತೊರೆಯಲಾರದೇ ಸದಾ ಒದ್ದಾಡುತ್ತಾಳೆ. ಆದರೂ ದಿನದಿಂದ ದಿನಕ್ಕೆ ಚೇತನ್ ಕಡೆಗೆ ಅವಳ ಒಲವು ಹೆಚ್ಚುತ್ತಲೇ ಹೋಗುತ್ತದೆ. ”ಮದುವೆ ಮಾಡಿಕೊಂಡು ಬಿಡೋಣ ನಾವು ಪಲ್ಲುಎಂದು ಚೇತನ್ ಹೇಳಿದಾಗ ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಮೊದಲ ಪ್ರೀತಿ ಅವಳನ್ನು ಮಾನಸಿಕವಾಗಿ ತುಂಬಾ ಹದಗೆಡಿಸುತ್ತದೆ. ಪ್ರಾಜೆಕ್ಟ್ ಮುಗಿಸಿ ಭಾರತಕ್ಕೆ ವಾಪಾಸ್ ಬಂದರೂ ಸದಾ ಚೇತುವಿಗಾಗಿ ಹಂಬಲಿಸುತ್ತಾಳೆ. ಆಗ ಮತ್ತೊಮ್ಮೆ ಅಮೇರಿಕಾಗೆ ತೆರಳುವ ಅವಕಾಶ ಸಿಗುತ್ತದೆ. ಅಲ್ಲಿ ಅವಳ ಮತ್ತು ಚೇತನ್ ಮಧ್ಯೆ ಏನಾಗುತ್ತದೆ ಎಂಬುದನ್ನು ತಿಳಿಯಲುಕ್ಷಮೆಓದಬೇಕು.

ಮಹಿಳಾವಾದದ ವ್ಯಾಖ್ಯಾನ ತಿರುಚಲ್ಪಡುತ್ತಿರುವ ಇಂದಿನ ದಿನದಲ್ಲಿ, ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ಯಾಸ ಕಡಿಮೆಯಾಗುತ್ತಿರುವ ಹೈಟೆಕ್ ಯುಗದಲ್ಲಿ ಅವುಗಳ ನಿಜವಾದ ಅರ್ಥವನ್ನು ಮಥಿಸುವ ಕೆಲಸವನ್ನು ಮಾಡಲುಕ್ಷಮೆಪ್ರಯತ್ನಿಸುತ್ತದೆ. ತನ್ನ ಬದುಕು ತನ್ನದು, ತನ್ನಿಷ್ಟದ ಮುಂದೆ ಯಾವ ನೈತಿಕತೆಗೂ, ಮೌಲ್ಯಕ್ಕೂ ಬೆಲೆ ಕೊಡಲಾರೆ ಎಂದು ಹೇಳುತ್ತಲೇ ಕಥಾ ನಾಯಕಿ ಮೌಲ್ಯಗಳ ಚೌಕಟ್ಟಿನಿಂದ ಹೊರ ಬರಲಾರದೇ ಒದ್ದಾಡುತ್ತಾಳೆ. ತಾನೂ ಸ್ವೇಚ್ಛಾಚಾರ ಮಾಡಿದರೆ ಉಳಿದವರಿಗೂ ತನಗೂ ಏನು ವ್ಯತ್ಯಾಸ ಉಳಿಯಿತು ಎಂಬ ಅಲೋಚನೆ ಅವಳ ತಲೆಯಲ್ಲಿ ಸದಾ ಕೊರೆಯುತ್ತದೆ.

ಕಾದಂಬರಿಯ ಬಹುತೇಕ ಭಾಗ ಅಮೇರಿಕಾದಲ್ಲಿ ನಡೆಯುತ್ತದಾದರೂ ಅಮೇರಿಕಾದ ಭೌತಿಕ ವರ್ಣನೆ ಎಲ್ಲೂ ಕಂಡು ಬರುವುದಿಲ್ಲ. ಭಾರತೀಯ ಸ್ತ್ರೀವಾದಕ್ಕೂ, ಪಾಶ್ಚಾತ್ಯ ಸ್ತ್ರೀವಾದಕ್ಕೂ ಏನಾದರೂ ವ್ಯತ್ಯಾಸ ಇದೆಯೇ? ಇದ್ದರೆ ಅವೆರಡೂ ಹೇಗೆ ಭಿನ್ನ ಎಂಬುದನ್ನು ಕಾದಂಬರಿ ವಿಮರ್ಶಿಸುವುದಿಲ್ಲ. ಕಾದಂಬರಿಯುದ್ದಕ್ಕೂ ಬರೀ ಪಲ್ಲವಿ ಮತ್ತು ಚೇತನ್ ತುಂಬಿಕೊಳ್ಳುತ್ತಾರೆ. ಬರೀ ಅವರಿಬ್ಬರ ನಡುವಿನ ಮಾತುಕತೆ, ಅಮೇರಿಕಾದಲ್ಲಿ ಅವರ ಸುತ್ತಾಟ, ಪದೇ ಪದೇ ಅವಳುಚೇತು ನನ್ನನ್ನು ಬಿಟ್ಟು ಹೋಗ ಬೇಡವೋಎನ್ನುವುದು ಕೆಲವು ಓದುಗರಿಗೆ ಏಕತಾನತೆಯಂತೆ ಭಾಸವಾದರೂ ಆಶ್ಚರ್ಯವಿಲ್ಲ. ಅವಳ ಗಂಡ ರಘುವಿನ ಬಗ್ಗೆ, ಮಗಳು ಪೂರ್ವಿ ಬಗ್ಗೆ ಸ್ವಲ್ಪ ಜಾಸ್ತಿ ಬರೆಯಬೇಕಿತ್ತೇನೋ.

ಮೈಸೂರಿನ ಅಗ್ರಹಾರದ ಸಾಂಪ್ರದಾಯಿಕ ಮನೆಯಲ್ಲಿ ಬೆಳೆದ ಹುಡುಗಿ, ಮದುವೆಯಾಗಿ ಒಂದು ಮಗು ಇರುವವಳು ತನ್ನ ಹಳೆಯ ಪ್ರೇಮಿ ಸಿಕ್ಕಿದೊಡನೆ ಏಕಾಏಕಿ ಬದಲಾಗಿ ಆತನಿಗಾಗಿ ಹಾತೊರೆಯುವುದನ್ನು ಭಾರತದ ಸಾಂಪ್ರದಾಯಿಕ ಕುಟುಂಬಗಳಲ್ಲಿ  ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಆದರೂ, ನಾವು ಭಾರತೀಯರು ಯಾವತ್ತೂ ಪ್ರತಿಪಾದಿಸುತ್ತಾ ಬಂದ ಮೌಲ್ಯ, ನಂಬಿಕೆ, ಕುಟುಂಬ ವ್ಯವಸ್ಥೆಯ ಮುಂದೆ ಯಾವುದೂ ದೊಡ್ಡದಲ್ಲ ಎನ್ನುವುದನ್ನು ಕಾದಂಬರಿಯೂ ಒಪ್ಪಿಕೊಳ್ಳುತ್ತದೆ.

ಪಲ್ಲವಿ-ಚೇತನ್ ನಡುವಿನ ಮಾತುಕತೆಯನ್ನು ಸ್ವಲ್ಪ ಎಳೆದಿರುವಂತೆ ಭಾಸವಾಗುತ್ತದೆ. ಇಡೀ ಕಾದಂಬರಿಯನ್ನು ಅವರಿಬ್ಬರ ಸುತ್ತಲೇ ಸುತ್ತಿಸುವುದನ್ನು ಬಿಟ್ಟು ಇತರ ಪಾತ್ರಗಳನ್ನೂ ಸ್ವಲ್ಪ ಜಾಸ್ತಿ ಪೋಷಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅನಿಸಿಕೆ .ಅವರಿಬ್ಬರ ನಡುವಿನ ಕಥೆಯನ್ನು ಕಡಿಮೆ ಪುಟಗಳಲ್ಲೇ ಇನ್ನೂ ಪರಿಣಾಮಕಾರಿಯಾಗಿ ಹೇಳಬಹುದಿತ್ತೇನೋ. ಕಾದಂಬರಿಯಲ್ಲಿ ಬಳಸಿರುವ ಭಾಷೆಯನ್ನು ಗಮನಿಸಿದಾಗ ಸಹನಾ ಅವರು ಭೈರಪ್ಪನವರ ಕಾದಂಬರಿಗಳಿಂದ ಸ್ಫೂರ್ತಿ ಪಡೆದುಕ್ಷಮೆಬರೆದಿದ್ದಾರೆಂದು ಓದುಗರಿಗೆ ಅನ್ನಿಸಲೂಬಹುದು.

ಮೊದಲಿನಿಂದಲೂ ತಮ್ಮ ಲೇಖನಗಳ ಮೂಲಕ ಢೋಂಗಿ ಮಹಿಳಾವಾದಿಗಳ ಪೊಳ್ಳು ಸಿದ್ಧಾಂತಗಳನ್ನು ಅನಾವರಣಗೊಳಿಸುತ್ತಲೇ ಬಂದಿರುವ ಸಹನಾ ವಿಜಯ್ ಕುಮಾರ್ಕ್ಷಮೆ ಮೂಲಕ ತಮ್ಮ ವಿಚಾರಧಾರೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಫಲರಾಗಿದ್ದಾರೆ. ಭೈರಪ್ಪನವರಿಂದ ಕಾದಂಬರಿಯ ಬಗ್ಗೆ ಮೆಚ್ಚುಗೆಯನ್ನೂ ಪಡೆದಿದ್ದಾರೆ. ವಿಷಯವನ್ನು ಕಗ್ಗಂಟಾಗಿಸದೇ ಒಂದೇ ಸಮನೇ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಚೊಚ್ಚಲ ಕಾದಂಬರಿಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ನೀಡುವಲ್ಲಿ ಸಫಲರಾಗಿದ್ದಕ್ಕೆ ಸಹನಾ ಅಭಿನಂದನಾರ್ಹರು. ಅವರ ಲೇಖನಿಯಿಂದ ಇನ್ನಷ್ಟು ಕಾದಂಬರಿಗಳು ಹೊರಬರಲಿ. ‘ಕ್ಷಮೆಯನ್ನು ಒಮ್ಮೆ ಓದಿ.

Wednesday, September 28, 2016

ನನ್ನ ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ...

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು...

ನನ್ನ ಅಮ್ಮ ನನ್ನ ಬಗ್ಗೆ ಕೇಳಿದರೆ
ಉರಿಯುತ್ತಿರುವ ದೀಪವನು ಆರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಎರಡು ಹನಿ ಕಣ್ಣೀರು ಸುರಿಸಿಬಿಡು

ನನ್ನ ಅಪ್ಪ ನನ್ನ ಬಗ್ಗೆ ಕೇಳಿದರೆ
ಅವರ ಬೆನ್ನನ್ನೊಮ್ಮೆ ನೇವರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವರ ಊರುಗೋಲನ್ನು ಮುರಿದುಬಿಡು

ನನ್ನ ತಂಗಿ ನನ್ನ ಬಗ್ಗೆ ಕೇಳಿದರೆ
ಬರಿದಾದ ಕೈಯ ಮಣಿಕಟ್ಟ ತೋರಿಸು
ಆದರೂ ಅರ್ಥವಾಗಲಿಲ್ಲವೆಂದರೆ
ರಕ್ತಸಿಕ್ತವಾದ ಈ ರಾಖಿಯನು ಮುಂದಿರಿಸು

ನನ್ನ ತಮ್ಮ ನನ್ನ ಬಗ್ಗೆ ಕೇಳಿದರೆ
ನಾ ಬರುತ್ತಿದ್ದ ಬರಿ ದಾರಿ ತೋರಿಸು
ಆದರೂ ಅರ್ಥವಾಗಲಿಲ್ಲವೆಂದರೆ
ಅವನ ಮುಖವನ್ನೊಮ್ಮೆ ಎದೆಗವಚಿ ಸಂತೈಸು

ನನ್ನ ಹೆಂಡತಿ ನನ್ನ ಬಗ್ಗೆ ಕೇಳಿದರೆ
ತಲೆ ತಗ್ಗಿಸಿ ಒಂದು ದೀರ್ಘ ನಿಟ್ಟುಸಿರು ಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವಳ ಕಾಲಿಗೆ ಬಿದ್ದು ಕಾಲುಂಗರ ತೆಗೆದುಬಿಡು

ನನ್ನ ಮಗಳು ನನ್ನ ಬಗ್ಗೆ ಕೇಳಿದರೆ
ಅವಳ ಹಣೆಗೊಂದು ಹೂಮುತ್ತನಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವಳನ್ನು ಬಿಗಿದಪ್ಪಿ ಜೋರಾಗಿ ಅತ್ತುಬಿಡು

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು…

ಎಸ್. ಡಿ. ಮಂಜುವಾಣಿ

Friday, September 23, 2016

ಚಂದಿರನ ಕೇಳಿದೆ ...

ಚಂದಿರನ ಕೇಳಿದೆ
ಕರೆತರುವೆಯಾ ನನ್ನವಳ
ಮೋಡದಲ್ಲಿ ಮರೆಯಾಗಿ
ನನ್ನ ಪ್ರಶ್ನೆಗೆ ಉತ್ತರಿಸದೆ
ಮರೆಯಾಗಿ ಹೋದ
ಸದಾ ಅವಳದೇ ಕನವರಿಕೆ
ಅವಳಿಲ್ಲದ ಬಾಳು ಹೇಳಲಾಗದ
ಚಡಪಡಿಕೆ ...
ರುಚಿಯಿಲ್ಲ , ಹಸಿವಿಲ್ಲ
ದಿನ ಬೆಳಗಾದರೆ ಅವಳದೇ ಧ್ಯಾನ
ಮಾತು ನೂರಿದ್ದರೂ ಮನದಲ್ಲಿ ಮೌನ
ಜನುಮ‌ ಮುಗಿಯುವ ತನಕ
ಉಸಿರಲ್ಲಿ ಉಸಿರಾಗಿ ಕಾಯುವೆನು
ಜೀವದಲಿ ಉಸಿರು ನಿಂತರೂ ಸಹ
ಇಹಲೋಕದಲಿ ಅವಳಿಗೆ ಒಳಿತು ಬಯಸುವೆನು
ಚಂದಿರನ ಕೇಳಿದೆ
ಕರೆತರುವೆಯಾ ನನ್ನವಳ
ಒಳ್ಳೆಯ ದಿನ ಬರುವುದೆಂದು
ತೋರಿಸಿದನು ಚಂದಿರನು ನಕ್ಷತ್ರಗಳ
ಹೀಗೊಂದು ದಿನ ಕಳೆಯಲು
ಬಂದಳವಳು ನನಸಾಗಿ
ವರವಾಗಿ ,ವಧುವಾಗಿ
ಸಿಹಿಯಾಗಿ ಬಾಳಲ್ಲಿ
ಸುಂದರ ಗೀತೆಯಾಗಿ
ಬರಿದಾದ ಬಾಳಲ್ಲಿ ನಕ್ಷತ್ರವಾಗಿ
ನನ್ನ ಹೆಜ್ಜೆಗೆ ಗುರುತಾಗಿ
ಅವಳೇ ನನ್ನ ಭಾವನೆಯ ಸ್ಪೂರ್ತಿಯಾಗಿ

Saturday, September 10, 2016

ನೆನಪು ....


ನೆನಪು ...

ಸಾಯುತ್ತೇನೆಂದು ತಿಳಿಯದ
ಅವಳು ಬೆಳಿಗ್ಗೆ ತಾನೇ
ಮದುವೆಗೆ ಹೋಗಿ ಬಂದು
ಕಳಚಿ ಬಿಸುಟ ನೀಲ ರೇಷಿಮೆ ಸೀರೆ,
ಇನ್ನೂ ಲಾಕರಿನಲಿ ಭದ್ರಪಡಿಸದ ಒಡವೆ,
ಹರಡಿದ್ದ ಕ್ಲಿಪ್ಪು, ಪೌಡರ್, ಒಣಹೂವು,
ಮೂಲೆಯಲಿ ಕಳಚಿದ ಮ್ಯಾಚಿಂಗ್ ಚಪ್ಪಲಿ;

ಮನೆಯ ತುಂಬ ಇನ್ನೂ ಮಾಸದ
ಅವಳು ಮೊನ್ನೆ ತಾನೇ ಮಾಡಿಟ್ಟ
ಸಾರಿನ ಪುಡಿಯ ಪರಿಮಳ,
ಒಣಹಾಕಿದ್ದ ಬಟ್ಟೆಗಳ ರಾಶಿ,
ಮಡಿಸದೇ ಬಿಟ್ಟ ಮೃದು ಹೊದಿಕೆ,
ಅವಳು ಮಲಗಿದ್ದ ನಲುಗಿದ ಹಾಸಿಗೆ,
ಅವಳೊರಗಿ ಕೂತಿದ್ದ ಕುರ್ಚಿ;

ಕೋಣೆಯಲಿ ಬೀಡುಬಿಟ್ಟ ಅವಳ ಮುನಿಸು,
ಕೋಣೆಯಲಿ ಅಡಗಿ ಕೂತ ಅವಳ ಕನಸು,
ಇಲ್ಲೇ ಅಡುಗೆ ಕೋಣೆಯಲಿ ನಕ್ಕ ನಗು,
ಬಚ್ಚಲಿನಲಿ ಅವಳ ಗುನುಗು ರಾಗ,
ಹಿತ್ತಲಿನಲ್ಲಿ ಎದೆ ಕಲಕುವ ಬಿಕ್ಕು,
ಅಲ್ಲಲ್ಲಿ ಅಡಗಿ ಕೂತ ಅವಳ ತಳಮಳ, ವಿಷಾದ,
ತುಂಟತನ, ಮೃದು ಪಾದದ ಹೆಜ್ಜೆ ಸದ್ದು ...

ಅಯ್ಯೋ ನೋಯಿಸುತ್ತವೆ ಎಲ್ಲ ನೆನಪುಗಳು,
ಸುಟ್ಟುಬಿಡಬೇಕಿತ್ತು ಎಲ್ಲವನೂ ಅವಳೊಡನೆಯೇ...
ಚಟ್ಟದ ಮೇಲೆ ಎಲ್ಲ ಒಟ್ಟಿ
ಛಟ್ಟಂತ ಸಿಡಿವ ಮೂಳೆಗಳೊಡನೆ
ಸುಟ್ಟು ಬೂದಿಯಾಗಿಸಬೇಕಿತ್ತು
ಎದೆಕೊರೆವ ಎಲ್ಲ ನೆನಪುಗಳನ್ನೂ ...

ಹೀಗೆಂದುಕೊಳ್ಳುವುದರಲ್ಲೇ ಕಂಡಿತು
ಅವಳು ಮುತ್ತಿಡುತ್ತಿದ್ದ ನನ್ನ ಗಲ್ಲ, ತುಟಿ
ಅವಳ ಬಳಸುತ್ತಿದ್ದ ನನ್ನ ಕೈಗಳು,
ಅವಳು ಕೆದರುತ್ತಿದ್ದ ತಲೆಗೂದಲು,
ಅವಳಲ್ಲಿ ಬೆರೆಯುತ್ತಿದ್ದ ನನ್ನ ದೇಹ,
ಅವಳಾಡುತ್ತಿದ್ದ ನನ್ನ ಬೆರಳುಗಳು,
ಅವಳು ಓಡಾಡುತ್ತಿದ್ದ ನನ್ನ ಮನಸ್ಸಿನ ಒಳಕೋಣೆ ...

ನೆನಪುಗಳೇ ಹೀಗೆ ... ಒದ್ದೆ ಒದ್ದೆ ..
ಹಸಿ ಹಸಿ ಕಟ್ಟಿಗೆಯಂತೆ ...
ಹೊತ್ತಿ ಉರಿಸುವುದು ಸುಲಭವಲ್ಲ ...

ಭಾರತಿ ಬಿ.ವಿ.