Wednesday, March 11, 2015

ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ನವದೆಹಲಿ: ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ. ಸೋಮವಾರ ಸೇರಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸಾಮಾನ್ಯ ಸಭೆ­ಯಲ್ಲಿ ಭೈರಪ್ಪ ಅವರನ್ನು ಫೆಲೋ ಗೌರವಕ್ಕೆ ಆಯ್ಕೆ ಮಾಡಲಾಯಿತು. ಭೈರಪ್ಪನವರ ಜತೆ ತೆಲುಗು ಸಾಹಿತಿ ಸಿ. ನಾರಾಯಣ ರೆಡ್ಡಿ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ.



ಸಾಹಿತ್ಯ ಅಕಾಡೆಮಿಯ ಫೆಲೋ, ಸಾಹಿತಿಗಳಿಗೆ ಸಲ್ಲುವ ಅತ್ಯಂತ ದೊಡ್ಡ ಗೌರವವಾಗಿದೆ. ಇದಕ್ಕೂ ಮೊದಲು ಡಾ.ಯು.ಆರ್‌.ಅನಂತಮೂರ್ತಿ ಅವರಿಗೆ ಈ ಗೌರವ ಸಂದಿತ್ತು. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂ ಗಾರ್‌, ದ.ರಾ. ಬೇಂದ್ರೆ ಮತ್ತು ಕೆ.ಎಸ್‌. ನರಸಿಂಹಸ್ವಾಮಿ ಅವರೂ ಸೇರಿದಂತೆ ಕನ್ನಡದ ಅನೇಕ ಲೇಖಕರಿಗೆ ಗೌರವ ಸಿಕ್ಕಿತ್ತು.
ಅಕಾಡೆಮಿ 21ಫೆಲೋಗಳಲ್ಲಿ ಭೈರಪ್ಪ­ನವರೂ ಒಬ್ಬರು. ಕರ್ನಾ ಟಕದಲ್ಲಿ ಮನೆ ಮಾತಾಗಿರುವ ಭೈರಪ್ಪ­ನವರು ದೊಡ್ಡ ಓದುಗ ಅಭಿಮಾನಿ­ಗಳನ್ನು ಹೊಂದಿದ್ದಾರೆ. ಮರಾಠಿ ಹಾಗೂ ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಭಾಷಾಂತರಗೊಂಡಿದೆ. ಅವರ ಕೃತಿಗಳು ಇಂಗ್ಲಿಷ್‌ಗೂ ಅನುವಾದಗೊಂಡಿವೆ.
2010ರಲ್ಲಿ ಸರಸ್ವತಿ ಸಮ್ಮಾನ್‌ ಪುರ­ಸ್ಕಾರಕ್ಕೂ ಪಾತ್ರರಾಗಿರುವ ಭೈರಪ್ಪನವರ ಒಲವು– ನಿಲುವುಗಳನ್ನು ಇಷ್ಟ ಪಡುವ­ವರಂತೆ ವಿರೋಧಿಸುವವರೂ ಇದ್ದಾರೆ. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ಭೈರಪ್ಪನವರ ಕೃತಿಗಳು ಉಳಿದವರಿಗಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.
‘ಆವರಣ’ ಸೇರಿದಂತೆ ಭೈರಪ್ಪನವರ ಅನೇಕ ಕೃತಿಗಳು ಎಂಟು, ಹತ್ತು ಮುದ್ರಣಗಳನ್ನು ಕಂಡಿವೆ.
ಪ್ರಜಾವಾಣಿ ಸುದ್ದಿ

No comments: