Sunday, March 16, 2014

ಒಂದಾಗಬೇಕು

ಸಾರುವರು ಈ ಭೂಮಿ ನಮ್ಮಮ್ಮನೆಂದು
ಇಲ್ಲಿರುವ ನಾವೆಲ್ಲ ಬಂಧುಗಳೆ ಎಂದು
ನೀಡುವರು ಭರವಸೆಯೆ ಅವರಾಗೆ ಬಂದು
ಭಯ ಬೇಡ ಬಾಳೋಣ ಜೊತೆಯಾಗಿ ಎಂದು

ಹೂಡುವರು ಸಂಚನ್ನು ಮರೆಯಾಗಿ ನಿಂದು
ಹೆಣೆಯುವರು ಬಲೆಯನ್ನು ವಂಚಿಸಲು ಬಂದು

ನೀಡುವರು ಗರಿಗರಿಯ ಹೊಸ ನೋಟನಿರಿದು
ಹರಿಸುವರು ಸುರೆಧಾರೆ ಮೈಮರೆಯಲೆಂದು
ಬೇಡುವರು ಕೈಮುಗಿದು ನೀಡಿ ಓಟೊಂದು
ತರುವಾಯ ಹೇಳುವರು ನಾವಾಳ್ವರೆಂದು

ಮರುದಿನವೇ ಆರಂಭ ನವನರಕ ನಮಗೆ
ನಗನಾಣ್ಯ, ನವಭಾಗ್ಯ ಅವರೆಲ್ಲರುಡಿಗೆ

ಹಗಲಿರುಳು ಬಗಿಯುವರು ಭೂತಾಯ ಒಡಲ
ನುಡಿಯುವರು ನಾವವಳ ಕೊಂಡಂಥ ಒಡೆಯ
ತಾ ಹಡೆದ ಮಕ್ಕಳ ಭಂಡತೆಗೆ ತಾಯಿ
ಮರುಮರುಗಿ ಹರಿಸಿಹಳು ಕಣ್ಣೀರ ಕೋಡಿ

ಕಡಿದಿಹರು ಬಿಡದಂತೆ ಕಾಡಿನ ಮಡಿಲ
ಕಸಿದಿಹರು ಖಗ ಮೃಗದ ಜೀವದಾ ನೆಲೆಯ
ಮರೆತಿಹರು ಹಸಿರದೇ ಜೀವದುಸಿರೆಂದು
ಮಾರಿಕೊಂಡರದ ತಮ್ಮ ಸೌಭಾಗ್ಯಕ್ಕೆಂದು

ಕೇಳಿದಿರಾ... ಹಸಿದೊಡಲ ಕಂದನಳುವನ್ನ
ದುರ್ದೆಸೆಗೆ ಗೋಳಿಡುವ ತಾಯ ಕರುಳನ್ನ
ಕಂಡಿರಾ... ಸೀರೆಯಾಸೆಗೆ ನೆರೆದು ಸಾವಪ್ಪರನ್ನ
ಒಪ್ಪತ್ತಿನೂಟಕೆ ಕೈಚಾಚಿ ಹಾತೊರೆವರನ್ನ

ಕಾರಣರು ಇದಕೆಲ್ಲ ಕಣ್ಣೆದುರಿಗಿಹರು
ನೂಕಿ ನರಕಕೆ ನಮ್ಮ ಗಹಗಹಿಸುತಿಹರು

ಬಿಡರೆಂದು ಬಾಳಲು ಒಂದಾಗಿ ನಾವು
ಬಿತ್ತುವರು ಜಾತಿಮತ ಧರ್ಮದ ಬೇವು
ಬಾಂಧವರ ಬಿರುಕದೇ ಇವರೆಡೆಗೆ ಠಾವು
ಅದಕಾಗೆ ಹುಡುಕುವರು ನೆಪಗಳನು ತಾವು

ಈ ತಾಯಿ ಶೋಷಣೆಯು ತಾ ನಿಲ್ಲಬೇಕು
ನೊಂದಿರುವ ಬಂಧುಗಳು ನಲಿದಾಡಬೇಕು
ಘಾತಕರ ತಲೆಸಿಡಿದು ಹೋಳಾಗಬೇಕು
ಅದಕಾಗೆ ನಾವೆಲ್ಲ ಒಂದಾಗಬೇಕು

ಕೆ.ಎಂ. ಗಂಗಾಧರಪ್ಪ

No comments: