Tuesday, November 19, 2013

ಯಾವ ರಾಗಕೊ ಏನೊ ...

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು
ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು

ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು

ಜಿ.ಎಸ್. ಶಿವರುದ್ರಪ್ಪ
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, November 17, 2013

ನೆನಪಾಗುತ್ತದೆ ...

ಮೂರು ಗಾಲಿಯ
ತಿರುಗು ಕುರ್ಚಿಯ ಮೇಲೆ
ತಲೆಯ ಮೇಲೆ ತಿರುಗುತ್ತ
ತಂಪು ಗಾಳಿಯ ನೂಕುವ
ಪಂಕದಡಿ ಕುಳಿತಾಗ
ನೆನೆಪಾಗುತ್ತದೆ
ಬಿಸಿಲ ಝಳಕ್ಕೆ
ಕಾದಗಾಳಿಗೆ ಬಾಡಿರುವ
ನಿನ್ನ ಮುಖ

ಸೂಟು ಬೂಟು ತೊಟ್ಟು
ಕನ್ನಡಿಯ ಮುಂದೆ ನಿಂತು
ಶಾಂಪು ಹಚ್ಚಿ ತೊಳೆದ
ತಲೆ ಕೂದಲನ್ನು
ಒಪ್ಪಮಾಡುವಾಗ
ನೆನಪಾಗುತ್ತದೆ
ಹೊತ್ತು ಮುಳುಗುವ ಹೊತ್ತು
ಕೆದರು ತಲೆಯ ಮೇಲೆ
ಹೊರೆಯ ಹೊತ್ತು
ಬರಿಗಾಲಿನಲಿ ಬರಬರನೆ
ಮನೆಗೆ ಬಂದದ್ದು

ಊಟದ ಟೇಬಲ್ಲಿನ ಮೇಲೆ
ಓರಣವಾಗಿ ಜೋಡಿಸಿರುವ
ಪರಿಕರಗಳನು ಕಂಡಾಗ
ನೆನೆಪಾಗುತ್ತದೆ
ಹೊಲದಲ್ಲಿ ಹಗಲೂಟಕ್ಕೆಂದು
ಕೊಟ್ಟ ರೊಟ್ಟಿಯನ್ನು
ಮಡಿಲಲ್ಲಿ ಕಟ್ಟಿ ತಂದು
ಗಂಟಲಿನಿಂದ ಗುಟುಕು
ಕೊಟ್ಟಂತೆ ಕೊಟ್ಟದ್ದು

ನೆನೆಪಾಗುತ್ತದೆ
ಎರಡನೇ ಓಣಿಯ ಊರೆಂಬ
ಊರಿನ ಜನ
ಹೊಟ್ಟೆಕಿಚ್ಚಿನ ಮೊಟ್ಟೆ ಇಟ್ಟಾಗ
ಸಿಟ್ಟಾಗಿ ಹಿಂಗಾಡಿದರೆ ನೆಟ್ಟಗಿರಲ್ಲ
ಎಂದು ಗುಟುರು ಹಾಕಿದ್ದು

ಎಟಿಎಂ ಯಂತ್ರದ ಮುಂದೆ ನಿಂತು
ರೊಕ್ಕದ ಗುಂಡಿ ಒತ್ತಿದಾಗ
ತಪತಪ ಬೀಳುವ
ಗರಿಗರಿಯ ಕೆಂಪನೆಯ
ನೋಟುಗಳನ್ನು ಕಂಡಾಗ
ನೆನಪಾಗುತ್ತದೆ
ಸೊಂಟಕ್ಕೆ ಸುತ್ತಿದ್ದ ಸೀರೆಯ
ಬಾಳೆಕಾಯಿ ಗಂಟಿನಿಂದ
ಬೆವರಿನಿಂದ ನೆಂದು
ಮೆದ್ದೆಯಾಗಿದ್ದ
ರೂಪಾಯಿಯ ನೋಟು
ತೆಗೆದು ಕೊಟ್ಟು
ಫೀಜು ಕಟ್ಟು ಎಂದದ್ದು

ದೀಪಾವಳಿ ಹಬ್ಬಕ್ಕೆ ಮಾಡಿರುವ
ಬಿಸಿಬಿಸಿ ಹೋಳಿಗೆಗೆ ತುಪ್ಪ ಹಚ್ಚಿ
ಹೊಟ್ಟೆ ತುಂಬ ಉಂಡು
ರಾಕೆಟ್ ಪ್ಲವರ್ ಪಾಟ್
ಹಚ್ಚಿ ಖುಷಿಪಡುವಾಗ
ನೆನಪಾಗುತ್ತದೆ
ಓದುವ ಮಗ ಬಂದಿಲ್ಲ
ಎಂದು ಊರೆಲ್ಲ ದೀಪಾವಳಿ
ಮಾಡುವಾಗ ಹಬ್ಬಮಾಡದೆ
ಮುದ್ದೆಮಾಡಿ ಉಂಡದ್ದು
ಆಮೇಲೆ
ಕುಟ್ಟು ಪಟಾಕಿ ಕೊಡಿಸಿದ್ದು

ನೆನಪಾಗುತ್ತದೆ
ಸರೀಕರೆದುರು ಸದರ
ಆಗಬಾರದು ನೋಡು
ಎಂದು ಬುದ್ಧಿ ಹೇಳಿದ್ದು
ಅವ್ವ ಹೆಂಗಿದೀಯ ಎಂದಾಗ
ನಂದೇನು ಬಿಡಪ್ಪಾ
ಇವತ್ತೋ ನಾಳೆಯೋ
ನೀನು ಚೆಂದಾಗಿರು
ಎಂದಾಗ
ಮೈಯೆಲ್ಲ ಬೆವರಿ
ಕಣ್ಣು ಮಂಜಾಗುತ್ತವೆ

ಕೆ.ಎಂ. ಗಂಗಾಧರಪ್ಪ

Monday, November 4, 2013

ಬೆಳಗು ಬಾ ಹಣತೆಯನು

ಬೆಳಗು ಬಾ ಹಣತೆಯನು
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಘಳಿಗೆಯಲ್ಲಿ
ಬೆಳಗು ಬಾ ಗೆಳತಿ
ನಿನ್ನ ಒಲವಿನ ಪ್ರಣತಿ
ಶತಮಾನಗಳ ತಿಮಿರ
ಮುಸುಕಿದೀ ಮಂದಿರದ ಎದೆಯಾಳದಲ್ಲಿ

ಬೆಳಗು ಬಾ ದೀವಿಗೆಯ
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಲಗ್ನದಲ್ಲಿ
ಎದೆಯ ಕಸವನು ಗುಡಿಸಿ
ರಂಗವಲ್ಲಿಯನ್ನಿರಿಸಿ
ಸಿಂಗರಿಸು ನನ್ನೆದೆಯ
ನಿನ್ನ ಪ್ರೇಮದ
ಅಮೃತ ಸಂಪತ್ತಿನಲ್ಲಿ

ಬೆಳಗು ಬಾ ಜ್ಯೋತಿಯನು
ಎದೆಯ ಮಂದಿರದಲ್ಲಿ
ಜಗಕೆ ಬೆಳಕಾಗುವೀ
ಶುಭ ಘಳಿಗೆಯಲ್ಲಿ
ಇನಿತು ದಿನ ಜಡ ನಾನು
ಬಂದೆ ಚೇತನ ನೀನು
ನಿನ್ನ ಶಕ್ತಿಯ ಬಲದಿ
ವ್ಯಕ್ತಿಯಾದೆನು ನಾನು
ಲೋಕದಲ್ಲಿ

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾವ ಮೋಹನ ಮುರಲಿ ಕರೆಯಿತು

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು

ಎಂ. ಗೋಪಾಲಕೃಷ್ಣ ಅಡಿಗ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, November 3, 2013

ಬಾ, ಮಳೆಯೇ ಬಾ ...

ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ

ನಲ್ಲೆ, ಹಿಂತಿರುಗಿ ಹೋಗದಂತೆ
ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು

ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ
ಬೀರು, ದೀಪವೇ, ಬೀರು, ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ

ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ
ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲ

ಪ್ರೇಮಿಗಳ ಸೀಮೆಯಲ್ಲಿ
ನಾವೀಗ ಅನಿಮಿಷರು, ನಮ್ಮ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ

ಬಿ.ಆರ್. ಲಕ್ಷ್ಮಣರಾವ್
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ದೀಪವಿರದ ದಾರಿಯಲ್ಲಿ

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೆ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೆ
ಬಿರು ಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಶೃತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೆ
ಬಿರುಗಾಳಿಗೆ ಗರಿವುದುರಿದ
ಹೊಂಗನಸಿನ ಮರಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು
ಸೇರಬಹುದೇ ನಾನು
ಕಡಲ ನೀಲಿಯೊಳು ಕರಗಬಹುದೇ ನಾನು

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ