Monday, October 28, 2013

ಜಯ ಭಾರತ ಜನನಿಯ ತನುಜಾತೆ

ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯ ಹೇ ರಸಋಷಿಗಳ ಬೀಡೆ

ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ..

ಜನನಿಯ ಜೋಗುಳ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ..

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ..

ತೈಲಪ ಹೊಯ್ಸಳರಾಳಿದ ನಾಡೆ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ..

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ..

ಕುವೆಂಪು
ಈ ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, October 27, 2013

ನೀನು ಮುಗಿಲು ನಾನು ನೆಲ

ನೀನು ಮುಗಿಲು ನಾನು ನೆಲ
ನಿನ್ನ ಒಲವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ

ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ
ನಮ್ಮಿಬ್ಬರ ಒಲುಮೆ  ನಲುಮೆ ಜಗಕಾಯಿತು ಹುಣ್ಣಿಮೆ
ನಾನಚಲದ ತುಟಿಯೆತ್ತುವೆ
ನೀ ಮಳೆಯೊಲು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ

ಸೂರ್ಯ ಚಂದ್ರ ಚಿಕ್ಕೆಗಣ್ಣ
ತೆರೆದು ನೀನು ಸುರಿವ ಬಣ್ಣ
ಹಸಿರಾಯಿತು ಹೂವಾಯಿತು ಚೆಲುವಾಯಿತು ನೆಲ
ನೀನು ಗಂಡು ನಾನು ಹೆಣ್ಣು
ನೀನು ರೆಪ್ಪೆ ನಾನು ಕಣ್ಣು
ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲಿ ಜಾರಿತೋ ಮನವು ...

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ 
ಬಿಕ್ಕುತಿಹಳು ಯಾರೋ ನೀರೆ

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೆ ಮೀರಿತೋ, ಇಲ್ಲದಾಯಿತೋ...

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Tuesday, October 22, 2013

ನೀಲನೇರಳೆ ಚಿತ್ತಾರ

clip_image002

ನೀಲನೇರಳೆ ಚಿತ್ತಾರ
ಅದಾವ ಸೊಗಡನು ನಲವಿನಿಂದರಸುತ ಹೊರಟೆ
ಎಲೆ ಹಾರುಕವೇ ?
ಅದಾವ ಬಳ್ಳಿಯುಸಿರಿನ ಪಾಲು ಪಡೆಯ ಹೊರಟೆ? |1|

ಮುಂಚಾಚಿಹವು ನಸುಗಾಳಿಯಲಿ
ಕಡುನೇರಳೆಯ ಎಳೆಕಯ್ಗಳು
ಮಾಗಿದಲರುಗಳ ಮದುವೆಯ ಮುಂದಾಳುತನಕೆ ಅನುವಾಗುವೆಯೋ?
ನಿನ್ನಾ ಹಸುಗೆಯ ಹೀರಹೊರಟೆಯೋ? |2|

ಕಣ್ಣೆವೆಯ ಸೆರೆಹಿಡಿದಿಹುದೀ
ಬಿರಿದ ಮಲೆಮಲರ ತಳಿರ ಮೆರುಗು
ಆ ತೋರಣದ ಹರವಿನನ್ತೇ ಕಾಣ್ವದೇನಿದು
ಕುಳಿರೆಲರ ನೇಲಲ್ಲಿ ನಿನ್ನೊಡಲ ತೇಲೋ? |3|

ಹೇಳೆಯಾ ಎಲೆ ಹಕ್ಕಿ ಒಳವು ನಿನ್ನುಲಿಯ ಸೆಲೆಗೆ
ಹೂವಂತೆ ಬಾರದೇಕೆನಗೆ ನಿನ್ನೊಲವ ಸಲಿಗೆ
ನಿನ್ನ ಸೆಳೆಗೊಳಲು ಅದಕಿಹುದದರ ಸವಿಗಂಪು
ಅದಕೆ ನಿನ್ನ ರೆಕ್ಕೆಯ ಕೊಡವೂ ಕಿವಿಗಿಂಪು |4|

ಅದಾವುದಕಿಹುದು ನಿನ್ನ
ಹುರುಪ ಹರಿಯುವ ಮೊನಚು?
ಬರಸಿಡಿಲೋ ಬಿರುಬಿಸಿಲೋ
ಏನೆಸಗಬಲ್ಲದಾ ಬಾನ್ ತುದಿಯ ಸಂಚು?
ತಡೆಯಿರದ ಸಡಗರವ ಸೂಸುತಲೇ
ಮೆಲ್ಲುತಿಹುದು ನಿನ್ನಾ ಚುಂಚದಂಚು! |5|

ಏನಿದೇನು
ಹಗಲ ಬೆಳಕ ಕಾವ ಮೇಲೊಸರಿಹುದೆ
ಇರುಳ ನೇರಳೆಯ ತಂಪು?
ಅಹುದೇನಿದು ದಿಟದಿ
ಪೊಡವಿಯಾಚೆಯ ಮಾಳ್ಪು? |6|

ಶ್ರೀ ಕಿಶನ್ ಬಿ.ಎಂ.
ಮೂಲ: honalu.net

ಬಾನು-ಭೂಮಿ

ಬಾನು ಭೂಮಿ ಸೇರಿದಾ
ಭಾವ ನಮ್ಮ ಪ್ರೇಮವು
ಚೆಲುವಾ ನನಗೇ ಮರುಳಾಗಿ ಹೋದೆ
ಮನಸು ಅರಳೀ ನಲಿದಾಡಿದೇ

ಯಾರು ಏನೇ ಹೇಳಲಿ
ನಾವು ಬೇರೆ ಆಗೆವು
ನಿನದೇ ನೆನಪು ಮನದೀ ಕಾಡಿದೆ
ಜನುಮ ನಿನಗೇ ಮುಡಿಪಾಗಿದೆ

ಪ್ರೇಮದಾ ಹೂವು ನೀನು
ನೋವನೆಂದೂ ನೀಡೆ ನಾನು
ಬಾಳಿನಾ ಹಾದಿಯಲ್ಲಿ
ಜೋಡಿಯಾಗಿ ಬಾರೆ ನೀನು

ಆಸೆಯೊಂದು ಮನದಿ ಮೂಡಿದೆ
ನಾನೇ ನದಿಯ ರೂಪತಾಳಿ
ಓಡಿಬಂದ ಹಾಗಿದೆ
ಇನಿಯಾ ಸನಿಹಾ
ಬೆರೆತಂತಾಗಿದೆ

ಬಾನು ಭೂಮಿ ಸೇರಿದಾ ಭಾವ ನಮ್ಮ ಪ್ರೇಮವು
ಯಾರು ಏನೇ ಹೇಳಲಿ ನಾವು ಬೇರೆ ಆಗೆವು
ಚೆಲುವಾ ನನಗೆ ಮರುಳಾಗಿ ಹೋದೆ

ಚೈತ್ರದಾ ಹೂವಿನಂತೆ
ಬೀಸಿಬಂದ ಗಾಳಿಯಂತೆ
ತಂಪು ತಂದ ಮಳೆಯು ನೀನು
ನನ್ನ ಬಾಳಿನ ನಲಿವೇ ನೀನು

ಸೋತು ಹೋದೆ ನಿನ್ನಾ ಆಸೆಗೆ
ನೂರು ಮಾತು ಏಕೆ ಬೇಕು
ಪ್ರೀತಿ ಸಾಕು ಬಾಳಿಗೆ
ಸಾರುವ ಲೋಕಕೆ
ಪ್ರೀತಿ ಒಂದೇ ಶಾಶ್ವತ

ಯಾರು ಏನೇ ಹೇಳಲಿ
ನಾವು ಬೇರೆ ಆಗೆವು
ಬಾನು ಭೂಮಿ ಸೇರಿದಾ
ಭಾವ ನಮ್ಮ ಪ್ರೇಮವು
ನಿನದೇ ಕನಸು ಮನದಿ ಕಾಡಿದೆ
ಜನುಮಾ ನಿನಗೇ ಮುಡಿಪಾಗಿದೆ

ಕೆ.ಎಂ. ಗಂಗಾಧರಪ್ಪ
ಈ ಕವಿತೆಯನ್ನು “ಪೊಲೀಸ್ ಕ್ವಾರ್ಟರ್ಸ್” ಚಿತ್ರದಲ್ಲಿ ಅಳವಡಿಸಲಾಗಿದೆ. ಈ ಹಾಡನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Monday, October 21, 2013

ನಾನು ಬಡವಿ ಆತ ಬಡವ

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬಾ
ನನಗೆ ನವಿರು ಬಟ್ಟೆ
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು

ದ.ರಾ. ಬೇಂದ್ರೆ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ 

Sunday, October 20, 2013

ಮುನಿಸು ತರವೇ ಮುಗುದೆ

ಮುನಿಸು ತರವೇ ಮುಗುದೆ 
ಹಿತವಾಗಿ ನಗಲು ಬಾರದೆ

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಝುಮ್ಮೆನ್ನಲು
ನವಭಾವ ತುಂಬಿ ತುಂಬಿ ಮನ ಹಾಡಲು 
ತೆರೆದಂತಿದೆ ಭಾಗ್ಯದ ಬಾಗಿಲು

ಎಷ್ಟೊಂದು ಕಾಲದಿಂದ ಹಂಬಲಿಸಿದೆ 
ನೀ ಬಂದು ಸೇರಿ ನನ್ನ ಮುದಗೊಳಿಸಿದೆ
ಜೀವನದ ನೂರು ಕನಸು ನನಸಾಗಿದೆ 
ಮುನಿಸೇತಕೆ ಬಗೆ ಮೂಡಿದೆ

ಹೊಸಬಾಳ ಬಾಗಿಲಲ್ಲಿ ನಾವೀದಿನ 
ನಿಂತಿರುವ ವೇಳೆಯಲ್ಲಿ ಏಕೀ ಮನ
ವಾಗರ್ಥವಾದಂತೆ ನಮ್ಮ ಮೈಮನ 
ಜತೆಸೇರಲು ಜೀವನ ಪಾವನ

ಸುಬ್ರಾಯ ಚೊಕ್ಕಾಡಿ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Saturday, October 5, 2013

ನೀರಿನ ಸಾಗರ ದಾಟಲು

ನೀರಿನ ಸಾಗರ ದಾಟಲು
ತೆಪ್ಪ ಇರಬೇಕು
ವಾ ವಾ||


ನೀರಿನ ಸಾಗರ ದಾಟಲು
ತೆಪ್ಪ ಇರಬೇಕು

ಸಂಸಾರ ಸಾಗರವನ್ನು
ದಾಟಲು
ತೆಪ್ಪಗಿರಬೇಕು
ವಾರೆ ವಾ||
 

ಮೂಲ: ಅಂತರ್ಜಾಲ

Thursday, October 3, 2013

ದೀಪವು ನಿನ್ನದೇ, ಗಾಳಿಯು ನಿನ್ನದೇ

ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.
 
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.

ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.

ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
 
ಕೆ.ಎಸ್. ನರಸಿಂಹಸ್ವಾಮಿ
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ
 

Wednesday, October 2, 2013

Reader’s Digest (Humour in Uniform)

The following joke, contributed by me, was published in the January 2011 issue of Reader’s Digest.

Untitled

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ಈಸ ಬೇಕಯ್ಯ ಗೆಣೆಯ,
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ
ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ 
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ 
ಕೈಯ ಚೆಲ್ಲಿ ಕೊರಗ ಬೇಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ

ಪ್ರೀತಿಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ
 
ಪ್ರೊ|| ದೊಡ್ಡರಂಗೇಗೌಡ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ 

ಹತ್ತು ವರ್ಷದ ಹಿಂದೆ

ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈ ಹಿಡಿದವರು ನೀವಲ್ಲವೇ

ಬೆಟ್ಟಗಳಾ ಬೆನ್ನಿನಲಿ ಬೆಟ್ಟಗಳಾ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೇ
ತಿಟ್ಟಿನಲ್ಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತಾ ನಡೆದವರು ನೀವಲ್ಲವೇ

ಬಾಗಿಲಿಗೆ ಬಂದವರು ಬೇಗ ಬಾ ಎಂದವರು
ಬರಬೇಕೆ ಎಂದವರು ನೀವಲ್ಲವೇ
ನೋಡು ಬಾ ಎಂದವರು ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೇ

ಸೆರಗೆಳೆದು ನಿಲ್ಲಿಸಿದವರು, ಜಡೆಯೆಳೆದು ನೋಯಿಸಿದವರು
ಎತ್ತರದ ಮನೆಯವರು ನೀವಲ್ಲವೇ
ನೀನೆ ಬೇಕೆಂದವರು, ನೀನೆ ಸಾಕೆಂದವರು
ಬೆಟ್ಟದಲಿ ನಿಂತವರು ನೀವಲ್ಲವೇ

ಕೈಗೆ ಬಳೆಯೇರದೇ ಅಯ್ಯೋ ನೋವೆಂದಾಗ
ಮಹಡಿಯಿಂದಿಳಿದವರು ನೀವಲ್ಲವೇ
ಬಳೆಗಾರ ಶೆಟ್ಟಿಯನು ಗದರಿಸಿಕೊಂಡವರು
ಬೆತ್ತವನು ತಂದವರು ನೀವಲ್ಲವೇ

ಹೊನ್ನು ಹೊಳೆ ನೀನೆಂದು, ಮುತ್ತು ಮಳೆ ನೀನೆಂದು
ಹಾಡಿ ಕುಣಿದವರು ನೀವಲ್ಲವೇ
ಮಲೆನಾಡ ಹೆಣ್ಣೆಂದು, ಒಲವಿತ್ತ ಹೆಣ್ಣೆಂದು
ಏನೇನೋ ಬರೆದವರು ನೀವಲ್ಲವೇ

ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟವರು ನೀವಲ್ಲವೇ
ಮಲ್ಲಿಗೆಯ ದಂಡೆಯನು ತುರುಬಿಗೆ ಹಿಡಿದವರು
ತುಟಿಗೆ ತುಟಿ ತಂದವರು ನೀವಲ್ಲವೇ

ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗಿ ಮೆರೆವವರು ನೀವಲ್ಲವೇ
ಗಂಡನಿಗೆ ಒಪ್ಪಾಗಿ, ಕಂದನಿಗೆ ದಿಕ್ಕಾಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ

ಕೆ.ಎಸ್. ನರಸಿಂಹಸ್ವಾಮಿ

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, 
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ 
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ ನಿತ್ಯೋತ್ಸವ
 
ಕೆ.ಎಸ್. ನಿಸಾರ್ ಅಹಮದ್
ಈ ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ಮರೆತಿರುವಾಗ

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನ
ಹಿರಿದು ಕೊಲ್ಲಲು ಬಳಿಗೆ ಬಾರದಿರು ನೆನಪೇ

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆನ್ನಲ್ಲೇ ಇರಿಯದಿರು ಓ ಜಾಣ ನೆನಪೇ

ಕೆ.ಎಸ್. ನಿಸಾರ್ ಅಹಮದ್
ಈ ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ನವೋದಯದ ಕಿರಣಲೀಲೆ

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ
ನದನದಿಗಳ ನೀರಿನಲ್ಲಿ
ಗಿರಿವನಗಳ ಮುಡಿಗಳಲ್ಲಿ
ಗಾನ ಕಲಾ ಕಾವ್ಯ ಶಿಲ್ಪ
ಗುಡಿಗೋಪುರ ಶಿಖರದಲ್ಲಿ
ಶುಭೋದಯವ ತೆರೆದಿದೆ

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರತಂತ್ರದ ಅಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ

ಹಿರಿಯರಲ್ಲಿ ಕಿರಿಯರಲ್ಲಿ
ಹಳಬರಲ್ಲಿ ಹೊಸಬರಲ್ಲಿ
ನವಚೇತನದುತ್ಸಾಹದ
ಚಿಲುಮೆಚಿಮ್ಮುವೆದೆಗಳಲ್ಲಿ
ಶುಭೋದಯವ ತೆರೆದಿದೆ

ಜಿ.ಎಸ್. ಶಿವರುದ್ರಪ್ಪ